ಹೊಸದಿಗಂತ ಡಿಜಿಟಲ್ ಡೆಸ್ಕ್:
ಕೆಪಿಸಿಸಿ ಎಂಬುದು ಕರ್ನಾಟಕ ಪ್ರದೇಶ ಕಮಿಷನ್ ಕಾಂಗ್ರೆಸ್ ಆಗಿ ಬದಲಾಗಿದೆ. ದಸರಾ ಉತ್ಸವದಲ್ಲಿ ಖ್ಯಾತ ಸರೋದ್ ವಾದಕ, ಪದ್ಮಶ್ರೀ ಪುರಸ್ಕೃತ ರಾಜೀವ್ ತಾರಾನಾಥ್ ಅವರ ಕಾರ್ಯಕ್ರಮ ಆಯೋಜಿಸಲು ಲಂಚ ಕೇಳಿರುವುದು ಇದಕ್ಕೆ ತಾಜಾ ಉದಾಹರಣೆ ಎಂದು ಮಾಜಿ ಸಚಿವ ಸಿ.ಟಿ.ರವಿ ಟೀಕಿಸಿದರು.
ಮಲ್ಲೇಶ್ವರದ ಬಿಜೆಪಿ ರಾಜ್ಯ ಕಾರ್ಯಾಲಯ ಜಗನ್ನಾಥ ಭವನದಲ್ಲಿ ಇಂದು ಮಾಧ್ಯಮ ಪ್ರತಿನಿಧಿಗಳ ಜೊತೆ ಮಾತನಾಡಿದ ಅವರು, ಹಿರಿಯ ಸಂಸ್ಕೃತಿ ಪುತ್ರನ ಬಳಿ 3 ಲಕ್ಷ ರೂ. ಲಂಚ ಕೇಳುವುದಾದರೆ ನಾಡಹಬ್ಬಕ್ಕೆ ಇದಕ್ಕಿಂತ ಕಳಂಕ ಬೇರೊಂದಿಲ್ಲ. ಇಷ್ಟು ಮಾತ್ರವಲ್ಲ, ಈ ಸರಕಾರ ಯಾವ ಕಲಾವಿದರನ್ನೂ ಬಿಡುತ್ತಿಲ್ಲ, ಇನ್ನು ಬೇರೆಯವರನ್ನು ಬಿಡುವರೇ ಎಂದು ವ್ಯಂಗ್ಯವಾಗಿ ಪ್ರಶ್ನಿಸಿದರು.
ಕಾಂಗ್ರೆಸ್ ಸರಕಾರದ ಕಮಿಷನ್ ದಂಧೆ ಕೇವಲ ಗುತ್ತಿಗೆದಾರರಿಗೆ, ಸರಕಾರಿ ಯೋಜನೆಗಳಿಗೆ ಸೀಮಿತವಾಗಿಲ್ಲ. ಅದು ಕಲಾವಿದರ ಗೌರವಧನದವರೆಗೂ ಕೈಚಾಚಿಬಿಟ್ಟಿದೆ. ಇದು ದುರಂತದ ಸಂಗತಿ ಮಾತ್ರವಲ್ಲದೆ ಸಾಂಸ್ಕೃತಿಕ ಅಧಃಪತನದತ್ತ ಇವರು ರಾಜ್ಯವನ್ನು ಒಯ್ಯುತ್ತಿದ್ದಾರೆ ಎಂದು ಆಕ್ಷೇಪಿಸಿದರು.
ಮಾನ್ಯ ಮುಖ್ಯಮಂತ್ರಿಗಳು ನಮ್ಮದು ಭ್ರಷ್ಟಾಚಾರರಹಿತ ಆಡಳಿತ ಎನ್ನುತ್ತಾರೆ. ಅಬ್ಬರಿಸಿ ಬೊಬ್ಬಿರಿವ ಸಿದ್ದರಾಮಯ್ಯ ತವರು ಜಿಲ್ಲೆಯಲ್ಲಿ ಅವರ ಮೂಗಿನ ಕೆಳಗೇ ಇದು ನಡೆದಿದೆ. ಬೇರೆ ಜಿಲ್ಲೆಗಳಲ್ಲಿ ಇನ್ನು ಪರಿಸ್ಥಿತಿ ಹೇಗಿರಬಹುದು ಎಂಬ ಪ್ರಶ್ನೆಯನ್ನು ಮುಂದಿಟ್ಟರು. ʻಕೆಪಿಸಿಸಿ ಎಂದರೆ ಕರ್ನಾಟಕ ಪ್ರದೇಶ ಕಮಿಷನ್ ಕಾಂಗ್ರೆಸ್ʼ ಆಗಿ ಬದಲಾಗಿದೆ. ಹಿಂದೆ ನಮ್ಮ ಸರಕಾರದ ಮೇಲೆ ಆರೋಪ ಮಾಡುತ್ತಿದ್ದರು. ಈಗ ಗುತ್ತಿಗೆದಾರ ಅಂಬಿಕಾಪತಿ ಕರೋಡ್ಪತಿಯಾಗಿದ್ದಾರೆ. ಅವರ ಮನೆಯಲ್ಲಿ 42 ಕೋಟಿ, ಇನ್ನೊಬ್ಬ ಬಿಲ್ಡರ್ ಕೇತಮಾರನಹಳ್ಳಿ ಸಂತೋಷ್ ಕೃಷ್ಣಪ್ಪ ಮನೆಯಲ್ಲಿ 40 ಕೋಟಿ- ಹೀಗೆ ಕೋಟಿ ಕೋಟಿ ಹೊರಕ್ಕೆ ಬರುತ್ತಿದೆ. ಇವರಿಬ್ಬರೂ ರಾಜ್ಯದ ನಂಬರ್ 1, ನಂಬರ್ 2 ಅವರ ಬೇನಾಮಿಗಳು ಎಂಬ ಮಾಹಿತಿ ನಮಗಿದೆ ಎಂದು ವಿವರ ನೀಡಿದರು. ಇದರ ಸಿಬಿಐ ತನಿಖೆ ಮಾಡಿ ಎಂದು ಆಗ್ರಹಿಸಿದರು.
ಬ್ರ್ಯಾಂಡ್ ಬೆಂಗಳೂರು ಎಂದರೆ ಭ್ರಷ್ಟ ಬೆಂಗಳೂರು
ಸಿಎಂ ಕುರ್ಚಿಗೆ ಟವೆಲ್ ಹಾಕಿದವರೊಬ್ಬರು ಚುನಾವಣೆ ಖರ್ಚಿಗೆ 2 ಸಾವಿರ ಕೋಟಿ ಕೊಡುವುದಾಗಿ ಹೇಳಿದ ಮಾಹಿತಿ ಇದೆ. ಹಾಲಿ ಮುಖ್ಯಮಂತ್ರಿಗಳು ಕಷ್ಟಪಟ್ಟು ಅದರ ಅರ್ಧ ವ್ಯವಸ್ಥೆ ಮಾಡುವುದಾಗಿ ಹೇಳಿದ ಮಾಹಿತಿ ಸಿಕ್ಕಿದೆ. ಇದು ಒಳಗಿನ ಸುದ್ದಿಯಾಗಿದ್ದು, ಸತ್ಯವನ್ನು ಅವರೇ ಹೇಳಬೇಕು. ಇದನ್ನು ನೋಡಿದರೆ ಬ್ರ್ಯಾಂಡ್ ಬೆಂಗಳೂರು ಎಂದರೆ ಭ್ರಷ್ಟ ಬೆಂಗಳೂರು ಎಂದು ಅರ್ಥವಾಗುತ್ತದೆ ಎಂದರು.
ತನಿಖೆ ಆದರೆ ಸಂಗ್ರಹಿತ ಮೊತ್ತ, ನಂಬರ್ 1ರಿಂದ ಆದ ಸಂಗ್ರಹ, ನಂಬರ್ 2 ಸಂಗ್ರಹಿಸಿದ ಮೊತ್ತದ ವಿವರ ಹೊರಬರುತ್ತದೆ. ಅಂತರರಾಜ್ಯ ವಿಷಯವಾದ ಕಾರಣ ಸಿಬಿಐ ತನಿಖೆಗೆ ಆಗ್ರಹಿಸುವುದಾಗಿ ಪ್ರಶ್ನೆಗಳಿಗೆ ಉತ್ತರ ನೀಡಿದರು.
ಅಬಕಾರಿ ಸುಂಕ, ವಿದ್ಯುತ್ ದರ, ಸ್ಟ್ಯಾಂಪ್ ಶುಲ್ಕ ಹೀಗೆ ಎಲ್ಲ ಬೆಲೆಏರಿಸಿದ ಬಳಿಕ ಬಾಕಿ ಬಿಲ್ ನೀಡಲು ನೀವು ಅಸಹಾಯಕತೆ ವ್ಯಕ್ತಪಡಿಸುತ್ತಿದ್ದೀರಿ. ಬಹುಶಃ ಪಂಜಾಬ್ ಬಳಿಕ ಕರ್ನಾಟಕದ ಸಿಎಂ ಕೂಡ ತನ್ನ ರಾಜ್ಯ ದಿವಾಳಿ ಆಗುತ್ತಿದೆ ಎಂದು ಮುನ್ಸೂಚನೆ ಕೊಟ್ಟಿದ್ದಾರೆ. ಇಷ್ಟಾದರೂ ಇವರು ನುಡಿದಂತೆ ನಡೆದಿದ್ದೇವೆ ಎಂದು ಜಾಹೀರಾತು ಕೊಡುವುದನ್ನು ನಿಲ್ಲಿಸಿಲ್ಲ ಎಂದು ಟೀಕಿಸಿದರು.