ಹೊಸದಿಗಂತ ಡಿಜಿಟಲ್ ಡೆಸ್ಕ್:
ರಾಜ್ಯ ಸರ್ಕಾರ ಆಂಧ್ರಪ್ರದೇಶಕ್ಕೆ 4 ಕುಮ್ಕಿ ಆನೆಗಳನ್ನ ಹಸ್ತಾಂತರ ಮಾಡಿದೆ. ಡಿಸಿಎಂ ಪವನ್ ಕಲ್ಯಾಣ್ ಅವರು ಆನೆಗಳ ಹಸ್ತಾಂತರಿಸುವ ದಾಖಲೆಯನ್ನು ಸ್ವೀಕಾರ ಮಾಡಿದ್ದಾರೆ.
ವಿಧಾನಸೌಧ ಮುಂಭಾಗ ಜ್ಯೂನಿಯರ್ ಅಭಿಮನ್ಯು, ರಂಜನ್, ಕೃಷ್ಣ, ದೇವ ಆನೆಗಳಿಗೆ ಪೂಜೆ ನೆರವೇರಿಸಲಾಯಿತು. ಮಹೇಂದ್ರ ಆನೆ ಕುಮ್ಕಿ ಆನೆಗಳ ಬೆಂಬಲಕ್ಕೆ ಬಂದಿದ್ದು, ಆಂಧ್ರಪ್ರದೇಶಕ್ಕೆ ಕಳಿಸಿದ ಬಳಿಕ ವಾಪಸ್ ಆಗಲಿದೆ.
ಆನೆ ಹಸ್ತಾಂತರಕ್ಕೆ ಕಾರಣವೇನು?
ಸಿಎಂ ಸಿದ್ದರಾಮಯ್ಯ ನೇತೃತ್ವದಲ್ಲಿ ಕರ್ನಾಟಕ ಸರ್ಕಾರ ಇಂದು 4 ಕುಮ್ಕಿ ಆನೆಗಳನ್ನು ಆಂಧ್ರಪ್ರದೇಶಕ್ಕೆ ಹಸ್ತಾಂತರ ಮಾಡಿದೆ. ರಾಜ್ಯದ ಆನೆಗಳನ್ನು ನೆರೆಯ ರಾಜ್ಯಕ್ಕೆ ಕಳುಹಿಸಲು ಪ್ರಮುಖವಾದ ಕಾರಣ ಅರಣ್ಯ ಭಾಗದಲ್ಲಿ ಕಾಡು ಪ್ರಾಣಿಗಳು ಹಾಗೂ ಮಾನವನ ಸಂಘರ್ಷ ತಪ್ಪಿಸುವುದಾಗಿದೆ.
ಪ್ರಾಣಿಗಳನ್ನು ಹಿಡಿಯಲು ಈ ಕುಮ್ಮಿ ಆನೆಗಳನ್ನು ಬಳಕೆ ಮಾಡಲಾಗುತ್ತೆ. ದುಬಾರೆ ಸೇರಿದಂತೆ ಬೇರೆ ಬೇರೆ ಕಡೆ ಈ ಆನೆಗಳಿಗೆ ತರಬೇತಿ ನೀಡಲಾಗಿದೆ. ಮಾನವ-ಕಾಡು ಪ್ರಾಣಿಗಳ ಸಂಘರ್ಷ ತಪ್ಪಿಸಲು ಪಳಗಿಸಿದ ಕುಮ್ಮಿ ಆನೆಗಳನ್ನೇ ಆಂಧ್ರಕ್ಕೆ ಹಸ್ತಾಂತರ ಮಾಡಲಾಗಿದೆ.
ಡಿಸಿಎಂ ಪವನ್ ಕಲ್ಯಾಣ್ ಏನಂದ್ರು?
ಈ ವೇಳೆ ಮಾತನಾಡಿದ ಆಂಧ್ರ ಡಿಸಿಎಂ ಪವನ್ ಕಲ್ಯಾಣ್ ಕೇವಲ ನಮಗೆ ಆನೆ ಕೋಡೋಕೆ ಸಿದ್ದರಾಮಯ್ಯ ಸರ್ಕಾರ ತೀರ್ಮಾನ ಮಾಡಿದೆ. ಬರೀ ಆನೆ ನೀಡೋದು ಅಲ್ಲ ಸಹೋದರ ರಾಜ್ಯವಾಗಿ ಕರ್ನಾಟಕ ನಮ್ಮ ಜೊತೆಗಿದೆ. ಇದರಿಂದ ಎರಡು ರಾಜ್ಯದ ಅರಣ್ಯ ಸುರಕ್ಷಿತವಾಗಿರುತ್ತೆ. ಕರ್ನಾಟಕದ ಸರ್ಕಾರ ಹಾಗೂ ಜನತೆಗೆ ನಾವು ಧನ್ಯವಾದ ತಿಳಿಸುತ್ತೇನೆ ಎಂದು ಹೇಳಿದರು.
ಇದು 20 ವರ್ಷಗಳ ಕನಸು. ಆಂಧ್ರಪ್ರದೇಶದಲ್ಲಿ 20 ವರ್ಷಗಳಿಂದ ತುಂಬಾ ಜನ ಮೃತಪಟ್ಟಿದ್ದಾರೆ. ಈಗ ಎಲ್ಲ ಸಮಸ್ಯೆ ಬಗೆಹರಿಯುತ್ತೆ. ನಾನು ಸಿಎಂ ಸಿದ್ದರಾಮಯ್ಯ, ಈಶ್ವರ್ ಖಂಡ್ರೆಗೆ ಭರವಸೆ ನೀಡುತ್ತೇನೆ. ಆನೆಗಳನ್ನ ಸುರಕ್ಷಿತವಾಗಿ ನೋಡಿಕೊಳ್ಳುತ್ತೇವೆ. ನಾವು ಭೇಟಿ ನೀಡಿ ಆನೆಗಳ ಯೋಗಕ್ಷೇಮ ನೋಡಿಕೊಳ್ಳುತ್ತೇನೆ. ಆನೆಗಳಿಗೆ ಸಮಸ್ಯೆ ಆದರೆ ಅದಕ್ಕೆ ನಾನೇ ಹೊಣೆ. ಜಯ ಕರ್ನಾಟಕ, ಜಯ ಆಂಧ್ರಪ್ರದೇಶ, ಜಯ ಭಾರತ ಎಂದು ಪವನ್ ಕಲ್ಯಾಣ್ ಅವರು ಹೇಳಿದರು.