ಹೊಸದಿಗಂತ ಡಿಜಿಟಲ್ ಡೆಸ್ಕ್:
ಹಾವೇರಿ ಜಿಲ್ಲೆಯಲ್ಲಿ ಬರಗಾಲದ ಪರಿಸ್ಥಿತಿ ಬಂದಿದ್ದು, ಜಿಲ್ಲೆಯಿಂದ ಆಯ್ಕೆಯಾದ ಎಲ್ಲ ಆರು ಕಾಂಗ್ರೆಸ್ ಶಾಸಕರು ಮೋಡ ಬಿತ್ತನೆಗೆ ಹಣಕಾಸು ಒದಗಿಸುವ ಮೂಲಕ ಪರಿಸ್ಥಿತಿಯನ್ನು ತಗ್ಗಿಸಲು ಮುಂದೆ ಬಂದಿದ್ದಾರೆ.
ಮುಂದಿನ ಎರಡರಿಂದ ಮೂರು ದಿನಗಳವರೆಗೆ ಮೋಡ ಬಿತ್ತನೆ ಕಾರ್ಯ ಮುಂದುವರಿಯುವ ಸಾಧ್ಯತೆ ಇದೆ. ಲೋಕೋಪಯೋಗಿ ಮತ್ತು ಹಾವೇರಿ ಜಿಲ್ಲಾ ಉಸ್ತುವಾರಿ ಸಚಿವ ಸತೀಶ್ ಜಾರಕಿಹೊಳಿ ಹುಬ್ಬಳ್ಳಿ ವಿಮಾನ ನಿಲ್ದಾಣದಿಂದ ಮೋಡ ಬಿತ್ತನೆ ವಿಮಾನಕ್ಕೆ ಹಸಿರು ನಿಶಾನೆ ತೋರಿದರು.
ಮಳೆ ಸುರಿಸುವ ಸಾಮರ್ಥ್ಯ ಹೊಂದಿರುವ ಮೋಡಗಳು ಲಭ್ಯವಿದ್ದ ಪ್ರದೇಶಗಳನ್ನು ಗುರುತಿಸಿ ವಿಮಾನದ ಮೂಲಕ ಬಿತ್ತನೆ ನಡೆಸಲಾಗಿದೆ. ಆದರೆ ಬ್ಯಾಡಗಿ, ರಟ್ಟೀಹಳ್ಳಿ, ಹಿರೇಕೆರೂರು ಹಾಗೂ ಶಿಗ್ಗಾವಿ ತಾಲೂಕುಗಳಲ್ಲಿ ಅಗತ್ಯ ಪ್ರಮಾಣದ ಮಳೆ ಮೋಡಗಳು ಕಂಡುಬರದ ಕಾರಣ ಮೋಡ ಬಿತ್ತನೆ ನಡೆಸಲು ಸಾಧ್ಯವಾಗಿಲ್ಲ. ಮುಂದಿನ ದಿನದಲ್ಲಿ ಅನುಕೂಲಕರ ಹವಾಮಾನ ಆಧರಿಸಿ ಕಾರ್ಯಾಚರಣೆ ನಡೆಸಲಾಗುತ್ತದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.



