ಹೊಸದಿಗಂತ ಡಿಜಿಟಲ್ ಡೆಸ್ಕ್:
ವಿದ್ಯುತ್ ಸಂಪರ್ಕ ನೀಡಲು 16.50 ಲಕ್ಷ ರೂ ಲಂಚ ಪಡೆಯುತ್ತಿದ್ದ ವೇಳೆ ಇಬ್ಬರು ಬೆಸ್ಕಾಂ ಅಧಿಕಾರಿಗಳು ರೆಡ್ ಹ್ಯಾಂಡ್ ಆಗಿ ಲೋಕಾಯುಕ್ತ ಬಲೆಗೆ ಬಿದ್ದಿದ್ದಾರೆ.
ಬೆಸ್ಕಾಂ ಅವಲಹಳ್ಳಿ ಕಛೇರಿಯ ಎಇಇ ರಮೇಶ್ ಬಾಬು ಮತ್ತು ಸೆಕ್ಷನ್ ಆಫಿಸರ್ ನಾಗೇಶ್ ಲೋಕಾಯುಕ್ತ ಬಲೆಗೆ ಬಿದ್ದವರು. ಪಿ. ಮುತ್ತುಸ್ವಾಮಿ ಎಂಬುವರ ಮಾಲೀಕತ್ವದ ಬೊಮ್ಮನಹಳ್ಳಿ ಗ್ರಾಮದ ಸರ್ವೆ ನಂ. 101/33, 149 ಜಮೀನಿನಲ್ಲಿ ನಿರ್ಮಾಣ ಮಾಡಿರುವ ಲೇಔಟ್ ಗೆ ವಿದ್ಯುತ್ ಸಂಪರ್ಕ ಪಡೆದುಕೊಳ್ಳಲು ಶ್ರೀ ಚಕ್ರ ಎಲೆಕ್ಟಿಕಲ್ಸ್ ರವರೊಂದಿಗೆ ಒಪ್ಪಂದವಾಗಿತ್ತು.
ಶ್ರೀ ಚಕ್ರ ಎಲೆಕ್ಟಿಕಲ್ ನ ಸೀನಿಯರ್ ಮ್ಯಾನೇಜರ್ ವಿಜಯಕುಮಾರ್ ರವರು ಈ ಬಗ್ಗೆ ದಿನಾಂಕ: 25/09/2024 ರಂದು ಬೆಸ್ಕಾಂ ಅವಲಹಳ್ಳಿ ಕಚೇರಿಯ ಎಇಇ ರಮೇಶ್ ಬಾಬು ರವರನ್ನು ಭೇಟಿ ಮಾಡಿ ವಿಚಾರ ಮಾಡಿದ್ದರು. ಆಗ ಈ ಕೆಲಸಕ್ಕೆ ಎಷ್ಟು ಖರ್ಚಾಗುತ್ತದೆ ಎಂಬುದಾಗಿ ಸೆಕ್ಷನ್ ಆಫೀಸರ್ ನಾಗೇಶ್ ರವರು ಹೇಳುತ್ತಾರೆ ಅವರನ್ನು ಭೇಟಿಯಾಗಿ ಎಂದಿದ್ದರು. ಅಲ್ಲಿಯವರೆಗೆ ಫೈಲ್ ಪೆಂಡಿಂಗ್ ಇಟ್ಟಿರುವುದಾಗಿ ತಿಳಿಸಿದ್ದರು.