ಹೊಸದಿಗಂತ ವರದಿ ಮಂಡ್ಯ:
ಹೆಲ್ಮೆಟ್ ಧರಿಸದೆ ವಾಹನ ಚಾಲನೆ ಮಾಡುತ್ತಿದ್ದಾರೆಂಬ ಕ್ಷುಲ್ಲಕ ಕಾರಣಕ್ಕೆ ಚಿಕ್ಕಮಗಳೂರಿನ ಯುವ ವಕೀಲ ಪ್ರೀತಂ ಮೇಲೆ ಹಲ್ಲೆ ನಡೆಸಿರುವುದು ಹಾಗೂ ಲಾಠಿ ಸುಟ್ಟು ತೊಡೆ ತಟ್ಟಿದ ಪೊಲಿಸರನ್ನೂ ಬಂಧಿಸುವಂತೆ ಆಗ್ರಹಿಸಿ ವಕೀಲರ ಸಂಘದ ಸದಸ್ಯರು ನಗರದಲ್ಲಿ ಪ್ರತಿಭಟನೆ ನಡೆಸಿದರು.
ವಕೀಲರ ಸಂಘದ ಎದುರು ಜಮಾವಣೆಗೊಂಡ ವಕೀಲರು, ನಂತರ ಬೆಂಗಳೂರು ಮೈಸೂರು ಹೆದ್ದಾರಿಯಲ್ಲಿ ಮಾರ್ಗವಾಗಿ ಮೆರವಣಿಗೆಯಲ್ಲಿ ಜೆ.ಸಿ.ವೃತ್ತಕ್ಕೆ ಧಾವಿಸಿ ಕೆಲ ಕಾಲ ಮಾನವ ಸರಪಳಿ ನಿರ್ಮಿಸಿ ರಸ್ತೆ ತಡೆ ನಡೆಸಿ ಪೊಲೀಸರ ವಿರುದ್ಧ ಘೋಷಣೆ ಕೂಗಿದರು.
ಈ ಸಂದರ್ಭದಲ್ಲಿ ಮಾತನಾಡಿದ ವಕೀಲರ ಸಂಘದ ಜಿಲ್ಲಾಧ್ಯಕ್ಷ ರಾಜೇಂದ್ರ, ಡಿ.30 ರಂದು ವಕೀಲ ಪ್ರೀತಂ ಮೇಲೆ, ಸಣ್ಣ ವಿಚಾರಕ್ಕೆ ಪೊಲೀಸರು ಬೂಟಿನ ಕಾಲಿನಲ್ಲಿ ಒದ್ದು ಹಲ್ಲೆ ಮಾಡಿದ್ದಾರೆ, ಇದಕ್ಕೂ ಮೊದಲು ಪ್ರೀತಂ ದ್ವಿಚಕ್ರ ವಾಹನದ ಕೀ ಕಿತ್ತುಕೊಂಡ ಪೊಲೀಸರ ನಡೆಯನ್ನ ಪ್ರಶ್ನೆ ಮಾಡಿದ ಯುವ ವಕೀಲ ಪ್ರೀತಂ ಅವರ ಮೇಲೆ ಮನಬಂದಂತೆ ಮಾರಣಾಂತಿಕವಾಗಿ ಹಲ್ಲೆ ಮಾಡಿ ದುಷ್ಕೃತ್ಯ ಎಸಗಿರುವ ಪೊಲೀಸರನ್ನು ಬಂಧಿಸಿ ಜೈಲಿಗೆ ಕಳುಹಿಸಬೇಕು ಎಂದು ಆಗ್ರಹಿಸಿದರು.
ಕಾನೂನು ಬದ್ಧವಾಗಿ ಪ್ರಕರಣ ದಾಖಲಿಸಲು ಪೊಲೀಸರಿಗೆ ಅವಕಾಶವಿದೆ, ಅದನ್ನ ಬಿಟ್ಟು ಪೊಲೀಸರು ಪ್ರತಿಭಟನೆ ನಡೆಸಲು ಸಾಧ್ಯವಿಲ್ಲ, ಹಲ್ಲೆ ಮಾಡಿದ ಪೊಲೀಸರಿಗೆ ಸ್ಟೇಷನ್ ಬೇಲ್ ನೀಡುತ್ತೀರಾ? ಇದಕ್ಕೆ ಬೇಲ್ ಕೊಡಲು ಅವಕಾಶವೇ ಇಲ್ಲ, ನಂತರ ಅವರನ್ನ ತೊಡೆ ತಟ್ಟಿ ವಕೀಲರನ್ನ ಅವಾಚ್ಯ ಶಬ್ಧಗಳಿಂದ ನಿಂದಿಸಲು ಅವಕಾಶ ಮಾಡಿಕೊಟ್ಟಿದ್ದೀರಾ, ಒಬ್ಬ ಸಾಮಾನ್ಯನು ಸಹ ನಿಮ್ಮ ಪೊಲೀಸ್ ಠಾಣೆಗೆ ಬರಲು ಭಯಪಡುತ್ತಿದ್ದಾರೆ, ಸ್ವಯಂ ದೂರು ದಾಖಲಿಸಿಕೊಂಡ ಹೈಕೋರ್ಟ್ ನ್ಯಾಯಮೂರ್ತಿಗಳ ವಿರುದ್ಧ ಪ್ರತಿಭಟನೆ ಮಾಡುತ್ತೀರಾ, ನಿಮಗೆ ಪ್ರತಿಭಟನೆ ಮಾಡಲು ಅವಕಾಶವೇ ಇಲ್ಲ ಎಂಬ ಸಾಮಾನ್ಯ ಜ್ಞಾನವೂ ಇಲ್ಲವೇ ಎಂದು ಆಕ್ರೋಶ ವ್ಯಕ್ತಪಡಿಸಿದರು.