ಹೊಸದಿಗಂತ ಡಿಜಿಟಲ್ ಡೆಸ್ಕ್:
ರಾಜ್ಯದಲ್ಲಿ ಸಿಗುತ್ತಿರುವ ತರಕಾರಿಗಳಲ್ಲಿ ಹೆಚ್ಚು ಲೆಡ್ ಪ್ರಮಾಣ ಕಂಡುಬಂದಿದೆ. ಆರೋಗ್ಯ ಚೆನ್ನಾಗಿರಲಿ ಎಂದು ಸೇವಿಸುವ ತರಕಾರಿಗಳೇ ಆರೋಗ್ಯಕ್ಕೆ ಹಾನಿ ಮಾಡುತ್ತಿವೆ.
ಕೇಂದ್ರ ಮಾಲೀನ್ಯ ನಿಯಂತ್ರಣ ಮಂಡಳಿಯು ರಾಜ್ಯದಾದ್ಯಂತ 70ಕ್ಕೂ ಹೆಚ್ಚು ತರಕಾರಿ ಸ್ಯಾಂಪಲ್ಗಳನ್ನು ಪರೀಕ್ಷಿಸಿದೆ. ಇದರಲ್ಲಿ 19 ಮಾದರಿಗಳಲ್ಲಿ ಸೀಸದ ಪ್ರಮಾಣ ಮಿತಿ ಮೀರಿರುವುದು ಕಂಡುಬಂದಿದೆ. ಈ ಹಿನ್ನೆಲೆಯಲ್ಲಿ ರೈತರಿಗೆ ಕೀಟನಾಶಕ ಬಳಕೆ ಬಗ್ಗೆ ಜಾಗೃತಿ ಮೂಡಿಸುವಂತೆ ಮಂಡಳಿ ಶಿಫಾರಸು ಮಾಡಿದೆ.
ಎಫ್ಎಸ್ಎಸ್ಎಐ ಮಾನ್ಯತೆ ಪಡೆದ ಪ್ರಯೋಗಾಲಯಗಳಲ್ಲಿ ಪರೀಕ್ಷೆ ನಡೆಸಬೇಕು ಎಂದು ಹೇಳಿದ ಸಿಪಿಸಿಬಿ, ಐದು ಸದಸ್ಯರ ಸಮಿತಿಯನ್ನು ರಚಿಸಿ 72 ತರಕಾರಿ ಮಾದರಿಗಳನ್ನು ಸಂಗ್ರಹಿಸಿತ್ತು. ಇದರಲ್ಲಿ ನೆಲಮಂಗಲ, ರಾಜಾಜಿನಗರ, ಕೋಲಾರ ಮಾರುಕಟ್ಟೆಗಳಿಂದ 53 ಮಾದರಿಗಳು ಹಾಗೂ ನೆಲಮಂಗಲ, ಕೋಲಾರ, ಚಿಕ್ಕಬಳ್ಳಾಪುರ ಕೃಷಿ ಕ್ಷೇತ್ರಗಳಿಂದ ಉಳಿದ ಮಾದರಿಗಳನ್ನು ಸಂಗ್ರಹಿಸಿ ಪರೀಕ್ಷೆ ನಡೆಸಲಾಗಿದ್ದು, ಸೀಸ ಹಾಗೂ ಕೀಟನಾಶಕಗಳ ಅಂಶ ಪತ್ತೆಯಾಗಿದೆ.



