ಹೊಸ ದಿಗಂತ ಡಿಜಿಟಲ್ ಡೆಸ್ಕ್:
ಬೆಳ್ತಂಗಡಿ ತಾಲೂಕಿನ ವಿವಿದೆಡೆ ಚಿರತೆಗಳ ಹಾವಳಿ ಮುಂದುವರಿದಿದ್ದು ಸೋಮವಾರ ರಾತ್ರಿ ಹಾಗು ಮಂಗಳವಾರ ರಾತ್ರಿಯ ವೇಳೆ ಹಲವೆಡೆ ಚಿರತೆಗಳು ಕಾಣಿಸಿಕೊಂಡಿದೆ.
ಬೆಳ್ತಂಗಡಿ ನಗರಕ್ಕೆ ತಾಗಿಕೊಂಡಿರುವ ಲಾಯಿಲದಲ್ಲಿ ಸೋಮವಾರ ರಾತ್ರಿಯ ವೇಳೆ ಹೆದ್ದಾರಿಯ ಪಕ್ಕದಲ್ಲಿ ಚಿರತೆ ಕಾಣಿಸಿಕೊಂಡಿದೆ.
ಕಲ್ಮಂಜ ಗ್ರಾಮದ ಕರಿಯನೆಲದಲ್ಲಿ ರಬ್ಬರ್ ಟ್ಯಾಪಿಂಗ್ ಕೆಲಸ ಮಾಡುತ್ತಿದ್ದ ಕಾರ್ಮಿಕರಿಗೆ ಚಿರತೆ ಎದುರಾಗಿದ್ದು, ಸ್ವಲ್ಪದರಲ್ಲಿಯೇ ಅಪಾಯದಿಂದ ತಪ್ಪಿಸಿಕೊಂಡಿದ್ದಾರೆ.
ಮಂಗಳವಾರ ರಾತ್ರಿ 7.30ರ ಸುಮಾರಿಗೆ ಕಡಿರುದ್ಯಾವರ ಗ್ರಾಮದ ಕಾನರ್ಪ ಪರಿಸರದಲ್ಲಿ ರಬ್ಬರ್ ಟ್ಯಾಪಿಂಗ್ ಕಾರ್ಮಿಕರಿಗೆ ಚಿರತೆ ಕಾಣಿಸಿದೆ. ಪ್ರತಿದಿನ ಒಂದಲ್ಲ ಒಂದು ಪ್ರದೇಶದಲ್ಲಿ ಚಿರತೆ ಓಡಾಟ ನಡೆಸುತ್ತಿದ್ದು, ಅರಣ್ಯ ಇಅಲಖೆಯ ಅಧಿಕಾರಿಗಳು ಚಿರತೆಗಳನ್ನು ಹಿಡಿಯಲು ಬೋನ್ ಅಳವಡಿಸಿದ್ದರೂ ಯಾವುದೇ ಪ್ರಯೋಜನವಾಗುತ್ತಿಲ್ಲ. ರಾತ್ರಿಯ ವೇಳೆ ಕೆಲಸ ಮಾಡುವ ರಬ್ಬರ್ ಟ್ಯಾಪಿಂಗ್ ಕಾರ್ಮಿಕರು, ರಾತ್ರಿಯ ವೇಳೆ ತೋಟಗಳಿಗೆ ನೀರು ಹಾಯಿಸಲು ತೆರಳುವವರು ಚಿರತೆ ಓಡಾಟದಿಂದಾಗಿ ಸಂಕಷ್ಟ ಎದುರಿಸುತ್ತಿದ್ದಾರೆ. ಕೆಲಸಕ್ಕೆ ಹೋಗಲು ಭಯಪಡುತ್ತಿದ್ದಾರೆ.



