ಹೊಸ ದಿಗಂತ ಡಿಜಿಟಲ್ ಡೆಸ್ಕ್:
ಈಗ ಚರ್ಚೆಯಲ್ಲಿರುವ ಜಾತಿಗಣತಿ ಎಂಬುದು ಸಮಾಜದ ಸರ್ವಾಂಗೀಣ ಉನ್ನತಿಗೆ ಪೂರಕವಾಗುವಂತೆ, ಸಾಮರಸ್ಯ ಮತ್ತು ಏಕತೆಗಳಿಗೆ ಭಂಗ ಬರದಂತೆ ಅನುಷ್ಠಾನವಾಗಬೇಕೆಂಬುದೇ ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಅಭಿಪ್ರಾಯವಾಗಿದೆ ಎಂದು ಸಂಘದ ಅಖಿಲ ಭಾರತೀಯ ಪ್ರಚಾರ ಪ್ರಮುಖ್ ಸುನೀಲ ಅಂಬೇಕರ್ ಹೇಳಿದ್ದಾರೆ.
ಸಾಮಾಜಿಕ ತಾಣ ಎಕ್ಸ್ ಮಾಧ್ಯಮದಲ್ಲಿ ಅವರು ಈ ಬಗ್ಗೆ ಅಭಿಪ್ರಾಯ ಹಂಚಿಕೊಂಡಿದ್ದಾರೆ. ರಾಷ್ಟ್ರೀಯ ಸ್ವಯಂಸೇವಕ ಸಂಘವು ಯಾವುದೇ ಬಗೆಯ ಬೇಧಭಾವ, ವೈಷಮ್ಯಗಳ ರಹಿತವಾದ, ಸಾಮಾಜಿಕ ನ್ಯಾಯವಿರುವ ಹಿಂದು ಸಮಾಜವನ್ನು ರೂಪಿಸುವುದರಲ್ಲಿ ಕಾರ್ಯನಿರತವಾಗಿದೆ. ಐತಿಹಾಸಿಕ ಕಾರಣಗಳಿಂದಾಗಿ ಸಮಾಜದ ಹಲವು ವರ್ಗಗಳು ಸಾಮಾಜಿಕ, ಆರ್ಥಿಕ, ಹಾಗೂ ಶೈಕ್ಷಣಿಕವಾಗಿ ಹಿಂದುಳಿದಿರುವುದು ಸತ್ಯ. ಇವರೆಲ್ಲರ ಅಭಿವೃದ್ಧಿ ಮತ್ತು ಸಶಕ್ತೀಕರಣಗಳಿಗಾಗಿ ಸರ್ಕಾರಗಳು ಆಯಾ ಕಾಲಕ್ಕೆ ತಕ್ಕ ಯೋಜನೆಗಳನ್ನು ರೂಪಿಸಿಕೊಂಡಿವೆ. ಅವೆಲ್ಲವನ್ನೂ ರಾಷ್ಟ್ರೀಯ ಸ್ವಯಂಸೇವಕ ಸಂಘವು ಸಮರ್ಥಿಸುತ್ತದೆ ಎಂದವರು ಹೇಳಿದ್ದಾರೆ.