ಹೊಸದಿಗಂತ ವರದಿ ಬೇಲೂರು :
ತಾಲ್ಲೂಕಿನ ಬಿಕ್ಕೋಡು ಹೋಬಳಿ ಮದಘಟ್ಟ ಗ್ರಾಮ ಪಂಚಾಯಿತಿ ವ್ಯಾಪ್ತಿಗೆ ಬರುವ ದೊಡ್ಡಿಹಳ್ಳಿ ಗ್ರಾಮದಲ್ಲಿ ಕಳೆದ ಒಂದುವರೆ ತಿಂಗಳಿಂದ ಗ್ರಾಮದಲ್ಲಿ ವಿದ್ಯುತ್ ಇಲ್ಲದೆ ಕುಡಿಯುವ ನೀರಿಗೆ ತೊಂದರೆಯಾಗಿದೆ ಎಂದು ಸಂಬಂಧ ಪಟ್ಟವರಿಗೆ ತಿಳಿಸಿದರೂ ಯಾವ ಪ್ರಯೋಜವಾಗುತ್ತಿಲ್ಲ, ಇಲ್ಲಿನ ಲೈನ್ಮ್ಯಾನ್ ಹಣ ನೀಡಿದರೆ ಮಾತ್ರ ಕಂಬ ಹತ್ತುವೆ ಎಂದು ಉಡಾಪೆಯಿಂದ ವರ್ತಿಸುವ ಲೈನ್ಮ್ಯಾನ್ ಜಗದೀಶ ಅಮಾನತು ಪಡಿಸಬೇಕು ಎಂದು ದೊಡ್ಡಿಹಳ್ಳಿ ಗ್ರಾಮಸ್ಥರು ಪ್ರತಿಭಟನೆ ನಡೆಸಿ ತಮ್ಮ ಆಕ್ರೋಶವನ್ನು ವ್ಯಕ್ತ ಪಡಿಸಿದರು.
ಈ ಸಂಬಂಧ ಪತ್ರಿಕೆಯೊಂದಿಗೆ ಮಾತನಾಡಿದ ದೊಡ್ಡಿಹಳ್ಳಿ ಗ್ರಾಮದ ಮುಖಂಡರಾದ ಯಶೋಧರ್, ಧರ್ಮಣ್ಣ ಮತ್ತು ಪ್ರವೀಣ್, ದೊಡ್ಡಿಹಳ್ಳಿ ಗ್ರಾಮ ತಾಲ್ಲೂಕಿನ ಗಡಿರೇಖೆಯಲ್ಲಿ ಬರುವ ಗ್ರಾಮ ಎಲ್ಲಾ ಮೂಲಭೂತ ಸೌಲಭ್ಯದಿಂದ ಹಿಂದುಳಿದೆ. ವಿಶೇಷವಾಗಿ ಕಳೆದ ಒಂದುವರೆ ತಿಂಗಳಿಂದ ಗ್ರಾಮದಲ್ಲಿ ಕರೆಂಟ್ ಇಲ್ಲದೆ ಕುಡಿಯುವ ನೀರಿಗೆ ತೊಂದರೆಯಾಗಿದ್ದು, ಮೈಲಿಗಟ್ಟಲೆ ನೀರನ್ನು ಹೊತ್ತು ತರಬೇಕಾದ ಹೀನ ಸ್ಥಿತಿ ಬಂದಿದೆ. ನೀರು ಇಲ್ಲದೆ ಶೌಚಾಲಯ ಬಳಕೆ ಇಲ್ಲದೆ ಬಯಲಿಗೆ ತೆರಳುತ್ತಿದ್ದಾರೆ. ನೀರಿನ ಅಭಾವದಿಂದ ಹೈನುಗಾರಿಕೆ ಸಂಕಷ್ಟದ ಸ್ಥಿತಿಯನ್ನು ತಲುಪಿದೆ. ಇನ್ನು ಬೇಸಿಗೆ ಆರಂಭದ ಮುನ್ನವೇ ಕರೆಂಟ್ ಇಲ್ಲದೆ ಹಿಂಗಾರು ಬೆಳೆಗಳು ಸಂಪೂರ್ಣ ಸರ್ವನಾಶವಾಗಿದೆ. ಗ್ರಾಮದಲ್ಲಿ ಕರೆಂಟ್ ಇಲ್ಲ ಶೀಘ್ರವೇ ಸರಿಪಡಿಸಿ ಎಂದು ಸಂಬಂಧ ಪಟ್ಟ ಚೆಸ್ಕಾಂ ಇಲಾಖೆಗೆ ತಿಳಿಸಿದರೂ ಯಾವ ಪ್ರಯೋಜವಾಗಿಲ್ಲ ತಮ್ಮ ಆಳಲನ್ನು ಪತ್ರಿಕೆಯೊಂದಿಗೆ ಹೇಳಿಕೊಂಡರು.
ದೊಡ್ಡಿಹಳ್ಳಿ ಗ್ರಾಮಕ್ಕೆ ಬರುವ ಲೈನ್ಮ್ಯಾನ್ ಜಗದೀಶ್ ಕಳೆದ 15 ವರ್ಷದಿಂದ ಇಲ್ಲಿಯೇ ಠಿಕಾಣ ಹಾಕಿಕೊಂಡು ಜನರ ಸಮಸ್ಯೆಗಳಿಗೆ ಸ್ಪಂದಿಸುತ್ತಿಲ್ಲ, ರಾಜರೋಷವಾಗಿಯೇ ಜನರ ಬಳಿ ಹಣ ಕೇಳುತ್ತಾರೆ ಮತ್ತು ಉಡಾಪೆಯಿಂದ ವರ್ತಿಸುತ್ತಾರೆ. ದೊಡ್ಡಿಹಳ್ಳಿ ಗ್ರಾಮಸ್ಥರು ಕೂಡ ಕೇಳಿದ ಸಂದರ್ಭದಲ್ಲಿ ಹಣ ನೀಡಿದರೆ ಮಾತ್ರ ಕಂಬ ಹತ್ತುವೆ ಇಲ್ಲವಾದರೆ ನಿಮ್ಮ ಅಪ್ಪಂದಿರು ಕೊಡುತ್ತಾರಾ? ಹಣ ಎಂದು ಬೈಯುತ್ತಾರೆ. ಈ ಬಗ್ಗೆ ಸ್ವತಃ ಜೆಇ ಅವರಿಗೆ ತಿಳಿಸಿದರೆ ನಮ್ಮ ಮಾತನ್ನೇ ಲೈನ್ಮ್ಯಾನ್ ಜಗದೀಶ ಕೇಳುತ್ತಿಲ್ಲ ಎಂದು ಉನ್ನತ ಅಧಿಕಾರಿಗಳೇ ಕೈ ಚೆಲ್ಲಿ ಕುಳಿತಿದ್ದಾರೆ. 500 ರೂಗಳನ್ನು ನೀಡಿದರೆ ನನಗೆ 2000 ಸಾವಿರ ಬೇಕು, ಎಲ್ಲರಿಗೂ ನೀಡಬೇಕು ಎಂದು ಜನರಿಗೆ ತೊಂದರೆ ನೀಡುವ ಲೈನ್ಮ್ಯಾನ್ ಜಗದೀಶ್ ಅವರನ್ನು ತಕ್ಷಣವೇ ಅಮಾನತು ಪಡಿಸಿ ಇಲ್ಲವೇ ವೃತ್ತದಿಂದ ಸ್ಥಳಾಂತರಗೊಳಿಸಬೇಕು ಇಲ್ಲವಾದರೆ ನಮ್ಮ ಹೋರಾಟ ಉಗ್ರ ಸ್ವರೂಪ ಪಡುತ್ತದೆ. ಮೊದಲು ಗ್ರಾಮಕ್ಕೆ ಕರೆಂಟ್ ಸರಿಪಡಿಸಬೇಕು ಎಂದು ಆಗ್ರಹಿಸಿದರು.
ಪ್ರತಿಭಟನೆಯಲ್ಲಿ ದೊಡ್ಡಿಹಳ್ಳಿ ಗ್ರಾಮಸ್ಥರಾದ ಅನಿಲ್ಕುಮಾರ್, ಲೋಕೇಶ್, ಹರ್ಷ, ಅಜೀತ್, ತಿರ್ಥಮಲ್ಲಯ್ಯ, ಶಿವಕುಮಾರ್, ದಿವಾಕರ್, ಹಾಲಪ್ಪ ಸೇರಿದಂತೆ ಇನ್ನು ಮುಂತಾದವರು ಹಾಜರಿದ್ದರು.