ಹೊಸದಿಗಂತ ವರದಿ,ಮಂಗಳೂರು:
ನಗರ ಪೊಲೀಸ್ ಆಯುಕ್ತರ ಕಚೇರಿಗೆ ಆಗಮಿಸಿದ ಎಲ್ಕೆಜಿಯ ಬಾಲೆಯೊಬ್ಬಳು ಕಮಿಷನರ್ ಕುರ್ಚಿಯನ್ನು ಒಂದು ನಿಮಿಷಗಳ ಕಾಲ ಅಲಂಕರಿಸಿದ ಘಟನೆ ಶನಿವಾರ ನಡೆಯಿತು.
ಮೃತ ಪೊಲೀಸ್ ಅಧಿಕಾರಿಯೊಬ್ಬರ ಪುತ್ರಿಯಾಗಿ ರುವ ಎಲ್ಕೆಜಿ ವಿದ್ಯಾರ್ಥಿನಿ ಪ್ರಣೀತಾ ಶನಿವಾರ ತನ್ನ ತಾಯಿಯೊಂದಿಗೆ ಕಮಿಷನರ್ ಕಚೇರಿಗೆ ಆಗಮಿಸಿದ್ದರು. ಇವರನ್ನು ಬರಮಾಡಿಕೊಂಡ ಕಮಿಷನರ್ ಶಶಿಕುಮಾರ್ ಪ್ರಣೀತಾಳನ್ನು ಒಂದು ನಿಮಿಷಗಳ ಕಾಲ ತಮ್ಮ ಕುರ್ಚಿಯಲ್ಲಿ ಕುಳ್ಳಿರಿಸಿದರು. ಈ ದೃಶ್ಯ ಕಂಡ ಬಾಲಕಿಯ ತಾಯಿ ಅಗಲಿದ ತಮ್ಮ ಪತಿಯನ್ನು ನೆನೆದು ಭಾವುಕರಾದರು.
2017 ರಲ್ಲಿ ದುರ್ಘಟನೆ ನಡೆದಿತ್ತು
ಪ್ರಣೀತಾಳ ತಂದೆ ರವಿಕುಮಾರ್ ಈ ಹಿಂದೆ ನಗರದ ಪಣಂಬೂರಿನಲ್ಲಿ ಕೆಲ ವರ್ಷಗಳ ಹಿಂದೆ ಡಿವೈಎಸ್ಪಿಯಾಗಿದ್ದರು. ಬಳಿಕ ಅವರು ಬೆಂಗಳೂರಿಗೆ ವರ್ಗಾವಣೆಗೊಂಡಿದ್ದರು. ಆದರೆ 2017 ರಲ್ಲಿ ನಡೆದ ಅಪಘಾತದಲ್ಲಿ ಅವರು ಸಾವನ್ನಪ್ಪಿದ್ದರು. ರವಿಕುಮಾರ್ ಅವರು ಮೈಸೂರಿನಲ್ಲಿ ಲೋಕಾಯುಕ್ತ ಎಸ್ಪಿಯಾಗಿಯೂ ಕರ್ತವ್ಯ ಸಲ್ಲಿಸಿದ್ದರು. 2017 ರಲ್ಲಿ ಬೆಂಗಳೂರಿನಲ್ಲಿ ಸಂಭವಿಸಿದ ರಸ್ತೆ ಅಪಘಾತದಲ್ಲಿ ಅವರು ಮೃತಪಟ್ಟಿದ್ದರು.
ತಂದೆ ಕೆಲಸ ಮಾಡುತ್ತಿದ್ದ ಕಚೇರಿ
ಪ್ರಣೀತಾ ಬೆಂಗಳೂರಿನಲ್ಲಿ ಎಲ್ಕೆಜಿ ಕಲಿಯುತ್ತಿದ್ದಾಳೆ. ಬಾಲಕಿಯ ತಾಯಿ ತಮ್ಮ ಪತಿ ರವಿಕುಮಾರ್ ಅವರು ಕೆಲಸ ಮಾಡುತ್ತಿದ್ದ ಕಚೇರಿಯನ್ನು ತೋರಿಸಲೆಂದು ಮಗಳನ್ನು ಮಂಗಳೂರಿಗೆ ಕರೆತಂದಿದ್ದರು. ಕಚೇರಿಗೆ ಬಂದಿದ್ದ ಪ್ರಣೀತಾಳನ್ನು ಮಂಗಳೂರು ಕಮೀಷನರ್ ಅವರು ತಮ್ಮ ಕುರ್ಚಿಯಲ್ಲಿ ಕೂರಿಸಿದ್ದರು. ಇದನ್ನು ಕಂಡು ಬಾಲಕಿ ಪ್ರಣೀತಾಳ ತಾಯಿ ಭಾವುಕರಾದರು.