ಹೊಸ ದಿಗಂತ ವರದಿ, ಮಡಿಕೇರಿ:
ಶುಕ್ರವಾರ ಬೆಳ್ಳಂಬೆಳಗ್ಗೆ ಕೊಡಗಿನ ಮೂವರು ಸರಕಾರಿ ಅಧಿಕಾರಿಗಳ ಮನೆ ಹಾಗೂ ಕಚೇರಿಗಳ ಮೇಲೆ ದಾಳಿ ನಡೆಸಿರುವ ಮೈಸೂರು ವಿಭಾಗದ ಲೋಕಾಯುಕ್ತ ಅಧಿಕಾರಿಗಳು ಅಪಾರ ಪ್ರಮಾಣದ ನಗದು, ಚಿನ್ನಾಭರಣ ಮತ್ತಿತರ ವಸ್ತುಗಳನ್ನು ಪತ್ತೆ ಮಾಡಿದ್ದಾರೆ.
ಬಲ್ಲ ಮೂಲಗಳ ಮಾಹಿತಿ ಆಧರಿಸಿ ದಾಳಿ ನಡೆಸಿದ ಅಧಿಕಾರಿಗಳು, ಲೋಕೋಪಯೋಗಿ ಇಲಾಖೆಯ ಕಾರ್ಯಪಾಲಕ ಅಭಿಯಂತರ ಡಿ.ನಾಗರಾಜು ಬಿನ್. ದೇವೇಗೌಡ ಅವರ ಬಳಿ ಎರಡು ಮನೆ, 1,086 ಗ್ರಾಂ ಚಿನ್ನ, 9,928 ಗ್ರಾಂ, ಬೆಳ್ಳಿ ,23.91ಲಕ್ಷ ನಗದು ಹಣ, ಕುಟುಂಬ ಸದಸ್ಯರುಗಳ ಹೆಸರಿನಲ್ಲಿ ಬ್ಯಾಂಕಿನ 11 ಅಕೌಂಟ್ಗಳಲ್ಲಿ ಒಟ್ಟು 59,36,399/- ರೂ, ಒಂದು
ಕಿಯಾ ಕಾರು, ಒಂದು ಸೆಲಾರಿಯೋ ಕಾರು, ಒಂದು ಸ್ಕೂಟರ್ ಹಾಗೂ ದಾಖಲಾತಿಗಳನ್ನು ಪತ್ತೆ ಹಚ್ಚಿದ್ದಾರೆ.
ಮತ್ತೊಂದೆಡೆ ಕುಶಾಲನಗರದ ಸಣ್ಣ ನೀರಾವರಿ ಇಲಾಖೆಯ ಜೂನಿಯರ್ ಇಂಜಿನಿಯರ್ ರಫೀಕ್ ಅವರ ಬಳಿ ಒಂದು ಮನೆ, 2 ಎಕರೆ ಕಾಫಿ ತೋಟ, 680 ಗ್ರಾಂ ಚಿನ್ನ, 250 ಗ್ರಾಂ ಬೆಳ್ಳಿ, 2.82ಲಕ್ಷ ರೂ. ನಗದು, ಇನ್ನೋವಾ ಕಾರು, ಬೊಲೆರೋ ಜೀಪ್, ಒಂದು ಸ್ಕೂಟರ್, ಹಾಗೂ ದಾಖಲಾತಿಗಳನ್ನು ಪತ್ತೆ ಮಾಡಿದ್ದಾರೆ.
ಕುಶಾಲನಗರದ ಪೊಲೀಸ್ ವೃತ್ತ ನಿರೀಕ್ಷಕರಾಗಿದ್ದು, ಪ್ರಸಕ್ತ ಬೆಂಗಳೂರಿನ ಗುಪ್ತವಾರ್ತೆಗೆ ವರ್ಗಾವಣೆಗೊಂಡಿರುವ ಎಂ.ಮಹೇಶ್ ಅವರ ಬಳಿ ಒಂದು ಭವ್ಯವಾದ ಮನೆ, 200 ಗ್ರಾಂ ಚಿನ್ನ, 2.5 ಕೆ.ಜಿ ಬೆಳ್ಳಿ, 5,500ರೂ. ನಗದು, ಹಾಗೂ ಕುಟುಂಬದ ಸದಸ್ಯರ ಹೆಸರುಗಳಲ್ಲಿ ಬ್ಯಾಂಕಿನ 4 ಖಾತೆಗಳಲ್ಲಿ ಒಟ್ಟು4,99,747 ರೂ., ಒಂದು ಕಾರು, ಒಂದು ಸ್ಕೂಟರ್ ಹಾಗೂ ದಾಖಲಾತಿಗಳು ಪತ್ತೆಯಾಗಿರುವುದಾಗಿ ಲೋಕಾಯುಕ್ತ ಅಧಿಕಾರಿಗಳು ತಿಳಿಸಿದ್ದಾರೆ.
ಆರೋಪಿತ ಸರ್ಕಾರಿ ಅಧಿಕಾರಿಗಳ ಮನೆ ಹಾಗೂ ಕಛೇರಿಗಳ ಮೇಲಿನ ಕಾರ್ಯಾಚರಣೆಯನ್ನು ಲೋಕಾಯುಕ್ತದ, ಅಪರ ಪೊಲೀಸ್ ಮಹಾನಿರ್ದೇಶಕ ಪ್ರಶಾಂತ್ ಕುಮಾರ್ ಠಾಕೂರ್ ಅವರ ಮಾರ್ಗದರ್ಶನದಲ್ಲಿ, ಮೈಸೂರು ವಿಭಾಗದ ಪೊಲೀಸ್ ಅಧೀಕ್ಷಕ ಎಸ್. ಸುರೇಶ್ಬಾಬು ನೇತೃತ್ವದಲ್ಲಿ ಡಿ.ವೈ.ಎಸ್.ಪಿಗಳಾದ ಪವನಕುಮಾರ್, ಕೃಷ್ಣಯ್ಯ, ಶಮಾಲತೀಶ್, ಎಸ್.ಟಿ ಒಡೆಯರ್ ಹಾಗೂ ಪೊಲೀಸ್ ನಿರೀಕ್ಷಕರಾದ ಲೋಕೇಶ್, ಉಮೇಶ್, ಶಶಿಕಲಾ, ರವಿಕುಮಾರ್, ಶಶಿಕುಮಾರ್, ಪ್ರಕಾಶ್, ಜಯರತ್ನ, ಶ ರೂಪಶ್ರೀ ಹಾಗೂ ಸಿಬ್ಬಂದಿಗಳು ನಡೆಸಿದ್ದರು.