ಹೊಸದಿಗಂತ ವರದಿ, ವಿಜಯನಗರ:
ಆರ್ಟಿಓ ಅಧಿಕಾರಿಗಳ ಆಟಾಟೋಪಕ್ಕೆ ಲಾರಿ ಚಾಲಕನೊಬ್ಬ ಬಲಿಯಾಗಿರುವುದನ್ನು ಖಂಡಿಸಿ ಹತ್ತಾರು ಲಾರಿಗಳನ್ನು ರಾಷ್ಟ್ರೀಯ ಹೆದ್ದಾರಿಯಲ್ಲಿ ಅಡ್ಡಾದಿಡ್ಡಿಯಾಗಿ ನಿಲ್ಲಿಸಿ, ಸಂಚಾರ ತಡೆದ ಘಟನೆ ಹೊಸಪೇಟೆ ಹೊರವಲಯದಲ್ಲಿ ಭಾನುವಾರ ನಡೆದಿದೆ.
ಹೊಸಪೇಟೆ ನಗರದ ಹೊರವಲಯದ ಶನೇಶ್ವರ ದೇವಸ್ಥಾನ ಸಮೀಪದ ಆರ್ಟಿಓ ಚೆಕ್ ಪೋಸ್ಟ್ನಲ್ಲಿ ಭಾನುವಾರ ಆರ್ಟಿಓ ಅಧಿಕಾರಿಗಳು ವಾಹನಗಳ ತಪಾಸಣೆ ನಡೆಸುತ್ತಿದ್ದರು. ಈ ವೇಳೆ ಲಾರಿ ಚಾಲಕನೊಬ್ಬ ಅಧಿಕಾರಿಗಳಿಗೆ ಲಂಚ ನೀಡಿ ವಾಹನದತ್ತ ಬರುತ್ತಿರುವಾಗ ಅತಿ ವೇಗವಾಗಿ ಬಂದ ಕಾರು ಡಿಕ್ಕಿ ಹೊಡೆದಿದೆ. ಅಪಘಾತದಲ್ಲಿ ಮಹಾರಾಷ್ಟ್ರ ಮೂಲದ ಲಾರಿ ಚಾಲಕ ಸ್ಥಳದಲ್ಲೇ ಮೃತಪಟ್ಟಿದ್ದಾನೆ ಎಂದು ತಿಳಿದು ಬಂದಿದೆ.
ಅಪಘಾತ ಸಂಭವಿಸುತ್ತಿದ್ದoತೆ ಆರ್ಟಿಓ ಅಧಿಕಾರಿಗಳು ವಾಹನ ಸಮೇತ ಸ್ಥಳದಿಂದ ಕಾಲ್ಕಿತ್ತಿದ್ದಾರೆ ಎಂದು ಸ್ಥಳೀಯರು ಆರೋಪಿಸಿದ್ದಾರೆ. ಘಟನೆಯಿಂದ ಕೆರಳಿದ ಸರಕು ಸಾಗಾಣಿಕೆ ವಾಹನ ಚಾಲಕರು ರಾಷ್ಟ್ರೀಯ ಹೆದ್ದಾರಿಯಲ್ಲೇ ಭಾರೀ ವಾಹನಗಳನ್ನು ನಿಲ್ಲಿಸಿ ಸಂಚಾರ ತಡೆದು, ಪ್ರತಿಭಟನೆಗಳಿದಿದ್ದಾರೆ. ಅಪಘಾತಕ್ಕೆ ಕಾರಣರಾದ ಆರ್ಟಿಓ ಅಧಿಕಾರಿಗಳನ್ನು ಬಂಧಿಸಬೇಕು ಎಂದು ಪಟ್ಟುಹಿಡಿದರು.
ಘಟನೆ ಹಿನ್ನೆಲೆಯಲ್ಲಿ ಸ್ಥಳಕ್ಕೆ ಆಗಮಿಸಿರುವ ಸಂಚಾರ ಠಾಣಾ ಪೊಲೀಸರು, ಪ್ರತಿಭಟನಾಕಾರರ ಮನವೊಲಿಕೆಗೆ ಹರಸಾಹಸ ನಡೆಸಿದರು.