ಹೊಸದಿಗಂತ ಡಿಜಿಟಲ್ ಡೆಸ್ಕ್:
ಜೀವನದಲ್ಲಿ ಒಂದೇ ಒಂದು ತಪ್ಪು ಮಾಡಿದೆ. ಉತ್ತಮ ರಸ್ತೆ ಆಗುತ್ತದೆ ಎಂದು ಮಹಾತ್ವಕಾಂಕ್ಷೆಯಿಂದ ನೈಸ್ ರಸ್ತೆ (NICE Road) ಮಾಡಿದೆ. ಆದರೆ ಮಹಾನುಭಾವರು ದೊಡ್ಡ ಪೆಟ್ಟು ಕೊಟ್ಟರು ಎಂದು ಮಾಜಿ ಪ್ರಧಾನಿ ಹೆಚ್ಡಿ ದೇವೇಗೌಡ (HD Devegowda) ಬೇಸರ ವ್ಯಕ್ತಪಡಿಸಿದ್ದಾರೆ.
ಬೆಂಗಳೂರಿನಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ನೈಸ್ ಯೋಜನೆಯಿಂದ ಬಡವರಿಗೆ ಅನ್ಯಾಯವಾಗಿದೆ. ನಮ್ಮ ಪಕ್ಷ ಇದರ ವಿರುದ್ದ ಧ್ವನಿ ಎತ್ತಿದೆ. ವಿಧಾನಸಭೆಯಲ್ಲೂ ಈ ಬಗ್ಗೆ ಸುದೀರ್ಘ ಚರ್ಚೆ ನಡೆದಿದೆ. ವಿಧಾನಸಭೆಯಲ್ಲಿ ಜಯಚಂದ್ರ ನೇತೃತ್ವದಲ್ಲಿ ಸದನ ಸಮಿತಿ ನೇಮಕ ಮಾಡಿ ವರದಿ ಕೊಟ್ಟಿದೆ. ಮೈಸೂರಿಗೆ ಒಂದು ಗಂಟೆಯಲ್ಲಿ ತಲುಪಬಹುದು ಎಂಬ ಕಾರಣಕ್ಕೆ ಯೋಜನೆಗೆ ಅನುಮತಿ ನೀಡಿದೆ ಎಂದರು.
ಇದೀಗ ಈ ಯೋಜನೆಯನ್ನು ಸರ್ಕಾರ ವಶಪಡಿಸಿಕೊಳ್ಳಬೇಕು ಎಂದು ಸದನ ಸಮಿತಿ ವರದಿ ಕೊಟ್ಟಿದೆ. ಆದರೆ ಸರ್ಕಾರ ಅಂತಿಮ ನಿರ್ಧಾರ ಮಾಡಿಲ್ಲ. ಅಕ್ಟೋಬರ್ 19 ರಲ್ಲಿ ಸಿಎಂ ಅವರಿಗೆ ಪತ್ರ ಬರೆದು ನೈಸ್ ಈ ಭೂಮಿಯನ್ನು ಸರ್ಕಾರ ವಶಪಡಿಸಿಕೊಳ್ಳಬೇಕು ಎಂದು ಆಗ್ರಹ ಮಾಡಿದ್ದೆ. ಆದರೆ ಸಿಎಂ ಕ್ರಮ ತೆಗೆದುಕೊಂಡಿಲ್ಲ ಎಂದು ಹೇಳಿದರು.
ಒಟ್ಟು 13,404 ಎಕರೆ ಭೂಮಿಯನ್ನು ನೈಸ್ ವಶಪಡಿಸಿಕೊಂಡಿದೆ. 13 ಸಾವಿರ ಎಕರೆ ಬೆಲೆ 707,77,766,040 ಕೋಟಿ ರೂ. ಎಂದು ಸದನ ಸಮಿತಿ ವರದಿ ಕೊಟ್ಟಿದೆ. ಅಧಿಕಾರಿಗಳೇ ಈ ವರದಿ ಕೊಟ್ಟಿದ್ದಾರೆ. ಈಗ ಈ ಭೂಮಿಯ ಬೆಲೆ ಇನ್ನೂ ಜಾಸ್ತಿ ಆಗುತ್ತದೆ ಎಂದು ಹೇಳಿದರು.
ಬಡವರ ಪರ ಮಾತನಾಡುವ ಸಿಎಂ ಯಾಕೆ ಕ್ರಮ ತೆಗೆದುಕೊಂಡಿಲ್ಲ. ಸಿದ್ದರಾಮಯ್ಯ ಎಷ್ಟು ವರ್ಷ ಆಳಿದರು ಕಪ್ಪುಚುಕ್ಕೆಯಿಂದ ಹೊರಗೆ ಬರಲು ಸಾಧ್ಯವಿಲ್ಲ. ಇದರ ವಿರುದ್ದ ಕ್ರಮ ತೆಗೆದುಕೊಳ್ಳದೇ ಹೋದರೆ ಕಪ್ಪುಚುಕ್ಕೆಯಿಂದ ಹೊರ ಬರುವುದಿಲ್ಲ. ಹೀಗಾಗಿ ನೈಸ್ ಯೋಜನೆ ಸರ್ಕಾರದ ವಶಕ್ಕೆ ಪಡೆಯಬೇಕು ಎಂದು ಆಗ್ರಹ ಮಾಡಿದರು.