ಹೊಸದಿಗಂತ ವರದಿ ಮಡಿಕೇರಿ:
ರಾಮನಗರದಲ್ಲಿ ವಕೀಲರ ಮೇಲೆ ಪೊಲೀಸರು ಅನವಶ್ಯಕವಾಗಿ ಮೊಕದ್ದಮೆ ದಾಖಲಿಸಿರುವುದನ್ನು ಮಡಿಕೇರಿ ವಕೀಲರ ಸಂಘ ತೀವ್ರವಾಗಿ ಖಂಡಿಸಿದೆ.
ರಾಮನಗರದಲ್ಲಿ ಕ್ಷುಲ್ಲಕ ವಿಚಾರಕ್ಕೆ ಸಂಬಂಧಿಸಿದಂತೆ ನಡೆದ ಘಟನೆ ಹಿನ್ನಲೆಯಲ್ಲಿ 40 ವಕೀಲರ ಮೇಲೆ ರಾಮನಗರ ಪೊಲೀಸರು ಮೊಕದ್ದಮೆ ದಾಖಲಿಸಿರುವುದನ್ನು ರಾಜ್ಯವ್ಯಾಪಿ ವಕೀಲರು ಖಂಡಿಸಿದ್ದಾರೆ. ವಕೀಲರ ಮೇಲೆ ಪ್ರಕರಣ ದಾಖಲು ಮಾಡಿರುವುದನ್ನು ಖಂಡಿಸಿ ರಾಮನಗರ ನ್ಯಾಯಾಲಯದ ಕಲಾಪಗಳನ್ನು ಅಲ್ಲಿನ ವಕೀಲರು ಬಹಿಷ್ಕರಿಸಿ ಪ್ರತಿಭಟನೆ ಕೈಗೊಂಡಿದ್ದಾರೆ.
ರಾಮನಗರದ ವಕೀಲ ಸಮುದಾಯಕ್ಕೆ ಬೆಂಬಲ ವ್ಯಕ್ತಪಡಿಸಿ ಮತ್ತು ಪೊಲೀಸರ ನಿಲವು ಖಂಡಿಸಿ ಮಡಿಕೇರಿ ವಕೀಲರ ಸಂಘವು ಕೂಡಾ ನಿರ್ಣಯ ಕೈಗೊಂಡಿದೆ. ವಕೀಲರ ವಿರುದ್ಧದ ಮೊಕದ್ದಮೆಯನ್ನು ಕೂಡಲೇ ಕೈಬಿಡಬೇಕು. ಪೊಲೀಸ್ ದೌರ್ಜನ್ಯಕ್ಕೆ ಕಡಿವಾಣ ಹಾಕಬೇಕು ಎಂದು ಮಡಿಕೇರಿ ವಕೀಲರ ಸಂಘದ ಉಪಾಧ್ಯಕ್ಷ ಎಂ.ಪಿ. ನಾಗರಾಜ್ ಹೇಳಿಕೆಯಲ್ಲಿ ತಿಳಿಸಿದ್ದಾರೆ.