ಹೊಸ ದಿಗಂತ ಡಿಜಿಟಲ್ ಡೆಸ್ಕ್:
ಪ್ರಯಾಗ್ ರಾಜ್ ನಲ್ಲಿ ನಡೆಯುತ್ತಿರುವ ಮಹಾಕುಂಭ ಮೇಳ ವೇಳೆ ಮಾಘಿ ಪೂರ್ಣಿಮೆ ದಿನವಾದ ಬುಧವಾರ ಸಂಜೆ 6 ಗಂಟೆಯವರೆಗೂ ಸುಮಾರು ೨ ಕೋಟಿಕ್ಕಿಂತ ಅಧಿಕ ಭಕ್ತರು ತ್ರಿವೇಣಿ ಸಂಗಮದಲ್ಲಿ ಪವಿತ್ರ ಸ್ನಾನ ಮಾಡಿದ್ದಾರೆ.
ಇಂದು ಬೆಳಗ್ಗೆಯಿಂದ ಆರಂಭವಾದ ಭಕ್ತರ ಪುಣ್ಯ ಸ್ನಾನಕ್ಕಾಗಿ ವಿಶೇಷ ವ್ಯವಸ್ಥೆ ಮಾಡಲಾಗಿತ್ತು. ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಬೆಳಗ್ಗೆ 4 ಗಂಟೆಯಿಂದಲೇ ತನ್ನ ನಿವಾಸದಲ್ಲಿ ಸ್ಥಾಪಿಸಲಾದ ವಾರ್ ರೂಮ್ ನಲ್ಲಿದ್ದು, ಮಹಾಕುಂಭ ಮೇಳದ ಭದ್ರತೆಯನ್ನು ಪರಿಶೀಲಿಸಿದ್ದಾರೆ.
ಮಾಘಿ ಪೂರ್ಣಿಮೆಯ ‘ಸ್ನಾನ’ದೊಂದಿಗೆ ಸಾಧು ಸಂತರ ವಾಸ ಮುಕ್ತಾಯವಾಗಲಿದೆ. ಸುಮಾರು 10 ಲಕ್ಷ ಸಾಧು ಸಂತರು, ಮಹಾ ಕುಂಭದಿಂದ ಹೊರಡಲು ಪ್ರಾರಂಭಿಸುತ್ತಾರೆ. ಹೀಗಾಗಿ ಭಕ್ತರು ಸಂಚಾರ ನಿಯಮ ಪಾಲಿಸುವಂತೆ ಆಡಳಿತ ಮನವಿ ಮಾಡಿದೆ.
ಈ ಮಧ್ಯೆ ಲಕ್ಷಾಂತರ ಭಕ್ತರು ಸಂಗಮದತ್ತ ಹರಿದುಬರುತ್ತಿದ್ದು, ಬುಧವಾರ ಸಂಜೆ 6 ಗಂಟೆಯವರೆಗೂ ಸುಮಾರು 2 ಕೋಟಿ ಭಕ್ತರು ತ್ರಿವೇಣಿ ಸಂಗಮ ಮತ್ತಿತರ ಘಟ್ಟಗಳಲ್ಲಿ ಸ್ನಾನ ಮಾಡಿದ್ದಾರೆ. ಮಹಾಕುಂಭ ಮೇಳ ಆರಂಭವಾದಾಗಿನಿಂದ ಇಲ್ಲಿಯವರೆಗೂ ಒಟ್ಟಾರೇ 47 ಕೋಟಿ ಜನರು ಸಂಗಮದಲ್ಲಿ ಸ್ನಾನ ಮಾಡಿದ್ದಾರೆ ಎಂದು ಉತ್ತರ ಪ್ರದೇಶ ಸರ್ಕಾರ ಮಾಹಿತಿ ನೀಡಿದೆ.