ಹೊಸದಿಗಂತ ಡಿಜಿಟಲ್ ಡೆಸ್ಕ್:
ಮಹಾ ಕುಂಭಮೇಳ ಕೋಟ್ಯಂತರ ಭಕ್ತರನ್ನ ಸೆಳೆಯುತ್ತಿರೋ ಜಗತ್ತಿನ ಅತಿ ದೊಡ್ಡ ಧಾರ್ಮಿಕ ಸಂಗಮ. ಪ್ರಯಾಗ್ರಾಜ್ ಮಿನಿ ಭಾರತದಂತೆ ಕಾಣಿಸ್ತಿದೆ. ಊಹೆಗೂ ಮೀರಿ ಭಕ್ತ ಸಾಗರವೇ ಹರಿದು ಬಂದಿದೆ.
ಮಂಗಳವಾರ ಮಕರ ಸಂಕ್ರಾಂತಿ. ಹೀಗಾಗಿ 2 ದಿನ ಸಂಗಮದಲ್ಲಿ ಬರೋಬ್ಬರಿ 4 ಕೋಟಿ ಭಕ್ತರು ಶಾಹಿ ಸ್ನಾನದ ನಿರೀಕ್ಷೆ ಇತ್ತು. 45 ದಿನಗಳ ಕಾಲ ನಡೆಯುವ ಮಹಾಕುಂಭಮೇಳದಲ್ಲಿ ದೇಶ, ವಿದೇಶಗಳಿಂದ 45 ಕೋಟಿ ಭಕ್ತರು ಭಾಗವಹಿಸುವ ನಿರೀಕ್ಷೆ ಇದೆ. ಮಹಾಕುಂಭ ಮೇಳ ನಡೆಯುವ ಜಾಗವನ್ನೇ ಉತ್ತರ ಪ್ರದೇಶದ 76ನೇ ಜಿಲ್ಲೆಯಾಗಿ ಘೋಷಣೆ ಮಾಡಲಾಗಿದೆ. ಇದರ ಮಧ್ಯೆ ಮಹಾ ಕುಂಭವೇಳದ 2ನೇ ದಿನವಾದ ಮಕರ ಸಂಕ್ರಾಂತಿ ಅಂಗವಾಗಿ ಸಂತರು ಸಾಧುಗಳು ಸೇರಿದಂತೆ ಸುಮಾರು 3.5 ಕೋಟಿ ಭಕ್ತರು ಪ್ರಯಾಗ್ರಾಜ್ನ ತ್ರಿವೇಣಿ ಸಂಗಮದಲ್ಲಿ ಪವಿತ್ರ ಸ್ನಾನ ಮಾಡಿದ್ದಾರೆ ಎಂದು ತಿಳಿದು ಬಂದಿದೆ.
ಹರಹರ ಮಹಾದೇವ್, ಜೈಶ್ರೀರಾಮ್ ಮತ್ತು ಜೈ ಗಂಗಾ ಮಾತೆ ಎಂಬ ಘೋಷಣೆ ಮೂಲಕ ಕೋಟ್ಯಾಂತರ ಭಕ್ತರು ಪವಿತ್ರ ಸ್ನಾನ ಮಾಡಿದ್ದಾರೆ. ಅಲ್ಲದೇ ಯಾವುದೇ ಅಹಿತಕರ ಘಟನೆ ನಡೆಯದಂತೆ ತ್ರಿವೇಣಿ ಸಂಗಮದ ಬಳಿ 60 ಸಾವಿರಕ್ಕೂ ಅಧಿಕ ಭದ್ರತಾ ಸಿಬ್ಬಂದಿಯನ್ನ ನಿಯೋಜಿಸಲಾಗಿದೆ ಅಂತ ಯುಪಿ ಗೃಹ ಇಲಾಖೆ ಕಾರ್ಯದರ್ಶಿ ಸಂಜಯ್ ಪ್ರಸಾದ್ ತಿಳಿಸಿದ್ದಾರೆ.