ಹೊಸದಿಗಂತ ಡಿಜಿಟಲ್ ಡೆಸ್ಕ್:
ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆ (KSCA) ಆಯೋಜಿಸುವ ಮಹಾರಾಜ ಟಿ20 ಲೀಗ್ ಈ ಬಾರಿಗೆ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆಯುವುದಿಲ್ಲ. ಜೂನ್ ತಿಂಗಳಲ್ಲಿ ನಡೆದ ಕಾಲ್ತುಳಿತ ದುರಂತದ ಪರಿಣಾಮವಾಗಿ ಈ ಪಂದ್ಯಾವಳಿಯನ್ನು ಮೈಸೂರಿನ ಶ್ರೀಕಂಠದತ್ತ ನರಸಿಂಹರಾಜ ಒಡೆಯರ್ ಕ್ರೀಡಾಂಗಣಕ್ಕೆ ಸ್ಥಳಾಂತರಿಸಲಾಗಿದೆ.
ಪೋಲೀಸರು ಈ ಬಾರಿ ಕ್ರೀಡಾಂಗಣದಲ್ಲಿ ಬೃಹತ್ ಕ್ರೀಡಾ ಕಾರ್ಯಕ್ರಮಕ್ಕೆ ಅನುಮತಿ ನೀಡದ ಹಿನ್ನೆಲೆಯಲ್ಲಿ, ಟೂರ್ನಿಯು ಮೈಸೂರಿಗೆ ಸ್ಥಳಾಂತರಿಸಲಾಗಿದೆ. ಈ ಜೊತೆಗೆ, ಟೂರ್ನಿಯ ಎಲ್ಲಾ ಪಂದ್ಯಗಳನ್ನು ಅಭಿಮಾನಿಗಳಿಲ್ಲದೆ ಆಡಲು ತೀರ್ಮಾನಿಸಲಾಗಿದೆ. ಅಂದರೆ, ಕ್ರೀಡಾಂಗಣದಲ್ಲಿ ಪ್ರೇಕ್ಷಕರಿಗೆ ಪ್ರವೇಶವಿಲ್ಲ.
ಈ ನಿರ್ಧಾರಕ್ಕೆ ಮೂಲ ಕಾರಣವೆಂದರೆ, ಜೂನ್ನಲ್ಲಿ ನಡೆದ RCB ವಿಜಯೋತ್ಸವದ ವೇಳೆ ಚಿನ್ನಸ್ವಾಮಿ ಕ್ರೀಡಾಂಗಣದ ಹೊರಗೆ ಉಂಟಾದ ಕಾಲ್ತುಳಿತ. ಈ ದುರಂತದಲ್ಲಿ 11 ಜನ ಮೃತಪಟ್ಟಿದ್ದರು ಮತ್ತು 50 ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದರು. ಈ ಘಟನೆ ಬಳಿಕ ಸರ್ಕಾರ ತನಿಖಾ ಸಮಿತಿ ರಚಿಸಿದ್ದು, ಕ್ರೀಡಾಂಗಣವನ್ನು ಅಸುರಕ್ಷಿತವೆಂದು ಘೋಷಿಸಿತು. ಈ ಹಿನ್ನೆಲೆಯಲ್ಲಿ KSCA ಮತ್ತೆ ಯಾವ ಘಟನೆಯು ನಡೆಯದಂತೆ ನೋಡಿಕೊಳ್ಳಲು ಈ ಕ್ರಮಕೈಗೊಂಡಿದೆ.
ಮಹಾರಾಜ ಲೀಗ್ನಲ್ಲಿ ಹಾಲಿ ಚಾಂಪಿಯನ್ ಮೈಸೂರು ವಾರಿಯರ್ಸ್ ಸೇರಿದಂತೆ, ಬೆಂಗಳೂರು ಬ್ಲಾಸ್ಟರ್ಸ್, ಹುಬ್ಬಳ್ಳಿ ಟೈಗರ್ಸ್, ಗುಲ್ಬರ್ಗ ಮಿಸ್ಟಿಕ್ಸ್, ಶಿವಮೊಗ್ಗ ಲಯನ್ಸ್, ಮಂಗಳೂರು ಡ್ರಾಗನ್ಸ್ ತಂಡಗಳು ಭಾಗವಹಿಸಲಿವೆ. ಕರುಣ್ ನಾಯರ್, ಮಾಯಾಂಕ್ ಅಗರ್ವಾಲ್, ದೇವದತ್ ಪಡಿಕ್ಕಲ್, ಮನೀಶ್ ಪಾಂಡೆ ಸೇರಿದಂತೆ ಹಲವಾರು ಸ್ಟಾರ್ ಆಟಗಾರರು ಈ ಟೂರ್ನಿಯಲ್ಲಿ ಆಡಲಿದ್ದಾರೆ.
ಮೈಸೂರಿನ ಕ್ರೀಡಾಂಗಣದಲ್ಲಿ ಈಗ ತೀವ್ರ ಸಿದ್ಧತೆ ನಡೆಯುತ್ತಿದ್ದು, ಟೂರ್ನಿಯನ್ನು ಯಶಸ್ವಿಯಾಗಿ ನಡೆಸಲು ಕ್ರಮ ಕೈಗೊಳ್ಳಲಾಗಿದೆ.