ಹೊಸದಿಗಂತ ವರದಿ, ಬನವಾಸಿ:
ಇಲ್ಲಿಯ ಐತಿಹಾಸಿಕ ಮತೋಬರ ಶ್ರೀ ಮಧುಕೇಶ್ವರ ದೇವಸ್ಥಾನದ ನೂತನ ಮಹಾಸ್ಯಂದನ ರಥದ ಮಹಾರಥೋತ್ಸವು ಸಂಭ್ರಮದಿಂದ ಗುರುವಾರ ಸಂಜೆ ನಡೆಯಿತು.
ಕಳೆದ ಎರಡು ದಿನಗಳಿಂದ ನೂತನ ರಥಕ್ಕೆ ವಿಷೇಶ ಪೂಜೆ ನೆರವೇರಿಸಿ, ಬಲಿ,ಜಪ,ಹವನದ ಬಳಿಕ ಶ್ರೀ ಮಧುಕೇಶ್ವರ ದೇವರ ಉತ್ಸವ ಮೂರ್ತಿಯನ್ನು ಅಲಂಕೃತ ಪಲ್ಲಕ್ಕಿಯಲ್ಲಿಟ್ಟು ವಿವಿಧ ವಾದ್ಯ ಮೇಳದೊಂದಿಗೆ ಮೆರವಣಿಗೆ ಮಾಡಲಾಯಿತು. ನೂತನ ಮಹಾಸ್ಯಂದನ ರಥಕ್ಕೆ ಪೂಜೆ ಸಲ್ಲಿಸಿ ಶ್ರೀ ಉಮಾಮಧುಕೇಶ್ವರ ದೇವರ ಉತ್ಸವ ಮೂರ್ತಿಯನ್ನು ಮನ್ಮಹಾಸ್ಯಂದನ ರಥದಲ್ಲಿ ಪ್ರತಿಷ್ಟಾಪನೆ ಮಾಡಲಾಯಿತು.
ಪ್ರತಿಷ್ಟಾಪನೆಯ ನಂತರ ಭಕ್ತರಿಗೆ ದರ್ಶನಕ್ಕಾಗಿ ಅವಕಾಶ ನೀಡಲಾಯಿತು. ಸಾವಿರಾರು ಭಕ್ತರು ಭಕ್ತಿಯಿಂದ ಸರದಿ ಸಾಲಿನಲ್ಲಿ ನಿಂತು ದೇವರ ದರ್ಶನ ಪಡೆದರು. ಭಕ್ತರು ದೇವರಿಗೆ ಹಣ್ಣು ಕಾಯಿ ಸಮರ್ಪಿಸಿ ಭಕ್ತಿ ಮೆರೆದರು. 10ಸಾವಿರಕ್ಕೂ ಅಧಿಕ ಭಕ್ತರು ದರ್ಶನ ಪಡೆದರು. ಸಂಜೆ ದೇವರಿಗೆ ಮಹಾಮಂಗಳಾರತಿ ನೆರವೇರಿದ ಬಳಿಕ ಭಕ್ತರ ಹರ್ಷೋದ್ಗಾರದ ನಡುವೆ ಶ್ರೀ ಮಧುಕೇಶ್ವರ ದೇವರ ನೂತನ ರಥದ ವೈಭವ ರಥೋತ್ಸವ ಆರಂಭಗೊಂಡಿತು. ಬೃಹತ್ ರುದ್ರಾಕ್ಷಿ ಮಾಲೆ, ವಿವಿಧ ಫಲ ಪುಷ್ಪ,ವಿದ್ಯುತ್ ದೀಪಗಳಿಂದ ಅಲಂಕರಿಸಿದ ನೂತನ ಮಹಾರಥವನ್ನು ಭಕ್ತ ಸಮೂಹ ಹರಹರ ಮಹಾದೇವ ಎಂಬ ಘೋಷ ವಾಕ್ಯವನ್ನು ಮೊಳಗಿಸುತ್ತ ಎಳೆಯುತ್ತ ಸಾಗಿದರು.
ವಿವಿಧ ವಾದ್ಯ ಮೇಳಗಳು ವೈಭವ ರಥೋತ್ಸವಕ್ಕೆ ಭಕ್ತಿಯ ಮೆರಗು ನೀಡಿತು. ನೆರೆದಿದ್ದ ಸಾವಿರಾರು ಭಕ್ತರು ಹೂ, ಬಾಳೆಹಣ್ಣು ರಥಕ್ಕೆ ಎಸೆದು ಭಕ್ತಿ ಸಮರ್ಪಿಸಿದರು. ವಯಸ್ಕರು, ಪುರುಷರು, ಮಹಿಳೆಯರು, ಮಕ್ಕಳು ಜಾತಿ ಭೇದವನ್ನು ಮರೆತು ಮಹಾ ರಥೋತ್ಸವದ ಸಂಭ್ರಮದಲ್ಲಿ ಪಾಲ್ಗೊಂಡರು.