ಹೊಸದಿಗಂತ ವರದಿ ಬನವಾಸಿ:
ಮಹಾ ಶಿವರಾತ್ರಿ ದಿನವಾದ ಭಾನುವಾರ ಬನವಾಸಿ ಪಟ್ಟಣದಲ್ಲಿ ಹಬ್ಬದ ವಾತಾವರಣ ನಿರ್ಮಾಣವಾಗಿದ್ದು ಭಕ್ತಾಧಿಗಳು ಇಲ್ಲಿನ ಐತಿಹಾಸಿಕ ಪುರಾತನ ಶ್ರೀ ಮಧುಕೇಶ್ವರ ಹಾಗೂ ಸಮೀಪದ ಗುಡ್ನಾಪೂರದ ಶ್ರೀ ಬಂಗಾರೇಶ್ವರ ಸಾನಿಧ್ಯಕ್ಕೆ ಆಗಮಿಸಿ ಭಕ್ತಿ ಪರವಶದಲ್ಲಿ ಮಿಂದು ಭಗವಂತನ ಆರಾಧನೆ ಮಾಡಿದರು.
ಮುಂಜಾನೆಯಿಂದಲೇ ದೇವಸ್ಥಾನಕ್ಕೆ ಸಾವಿರಾರು ಭಕ್ತರು ಆಗಮಿಸಿದರು. ಸರದಿ ಸಾಲಿನಲ್ಲಿ ನಿಂತು ಸಾಂಪ್ರದಾಯಿಕವಾಗಿ ರೂಢಿಯಲ್ಲಿ ಬಂದಂತೆ ಗರ್ಭಗುಡಿ ಪ್ರವೇಶಿಸಿ ಕ್ಷೇತ್ರದಲ್ಲಿನ ಶಿವಲಿಂಗಕ್ಕೆ ಬಿಲ್ವಾ ಪತ್ರೆ, ಹೂ ಅರ್ಪಿಸಿ, ಜಲ, ಎಳನೀರಿನಿಂದ ಅಭಿಷೇಕ ಮಾಡಿ ಪುನೀತರಾದರು. ಇಷ್ಟಾರ್ಥ ಸಿದ್ಧಿಗಾಗಿ ವಿಶೇಷ ಪೂಜೆಗಳನ್ನು ನೆರವೇರಿಸಿದರು.
ಇದನ್ನೂ ಓದಿ:
ದೇವಸ್ಥಾನಕ್ಕೆ ಆಗಮಿಸಿದ ಭಕ್ತಾದಿಗಳಿಗೆ ನಮೋ ಅಭಿಮಾನಿ ಬಳಗ, ಗುಡ್ನಾಪೂರ ಸಮೀಪದ ನಾಗ ಚೌಡೇಶ್ವರಿ ಅಯ್ಯಪ್ಪ ಸೇವಾ ಸಮಿತಿ ಹಾಗೂ ವಿವಿಧ ಸಂಘ ಸಂಸ್ಥೆಗಳು ತಂಪುಪಾನೀಯ, ಹಣ್ಣು, ಅಲ್ಪೋಪಹಾರ ಸೇವೆಯನ್ನು ನೀಡುವುದರ ಮೂಲಕ ಭಕ್ತಿ ಸಮರ್ಪಿಸುತ್ತಿದ್ದಾರೆ.
ಪಟ್ಟಣ ಹಾಗೂ ಸುತ್ತಲಿನ ಊರುಗಳಿಂದ ಸಾವಿರಾರು ಭಕ್ತರು ಆಗಮಿಸಿ ಭಗವಂತನ ದರ್ಶನ ಪಡೆದು ಪುನೀತರಾದರು. ಶ್ರೀ ಮಧುಕೇಶ್ವರ ದೇವಸ್ಥಾನ ಆಡಳಿತ ಮಂಡಳಿ ಹಾಗು ಸ್ವಯಂ ಸೇವಕರು ಭಕ್ತರಿಗೆ ಯಾವುದೇ ರೀತಿಯ ತೊಂದರೆ ಆಗದಂತೆ ಸಕಲ ರೀತಿಯಲ್ಲಿ ಸಹಕರಿಸುತ್ತಿದ್ದಾರೆ.



