ಹೊಸದಿಗಂತ ಡಿಜಿಟಲ್ ಡೆಸ್ಕ್:
ಛತ್ತೀಸ್ ಗಢದ ಬಿಜಾಪುರ ಮತ್ತು ನಾರಾಯಣಪುರ ಪ್ರದೇಶಗಳಲ್ಲಿ ನಡೆದ ಬೃಹತ್ ಕಾರ್ಯಾಚರಣೆಯಲ್ಲಿ 22 ಮಾವೋವಾದಿಗಳು ಭಾನುವಾರ ಶರಣಾಗಿದ್ದಾರೆ.
ಈ ಕುರಿತು ಮಾಹಿತಿ ನೀಡಿದ ಛತ್ತೀಸ್ ಗಢದ ಬಿಜಾಪುರದ ಸಿಆರ್ ಪಿಎಫ್ ಡಿಐಜಿ ದೇವೇಂದ್ರ ಸಿಂಗ್ ನೇಗಿ , ಇಂದು 22 ವ್ಯಕ್ತಿಗಳು ಮಾವೋವಾದಿ ಸಿದ್ಧಾಂತವನ್ನು ತೊರೆದು ಮುಖ್ಯವಾಹಿನಿಗೆ ಸೇರಿದ್ದಾರೆ. ನಾವು ಅವರನ್ನು ಹೃತ್ಪೂರ್ವಕವಾಗಿ ಸ್ವಾಗತಿಸುತ್ತೇವೆ. ಬಿಜಾಪುರ ಪೊಲೀಸರು ಮತ್ತು ಕೇಂದ್ರ ಮೀಸಲು ಪೊಲೀಸ್ ಪಡೆ ಈ ಪ್ರದೇಶದಾದ್ಯಂತ ಹೊಸ ಶಿಬಿರಗಳನ್ನು ಸ್ಥಾಪಿಸುತ್ತಿದ್ದು, ರಸ್ತೆಗಳು ಮತ್ತು ಆರೋಗ್ಯ ಸೌಲಭ್ಯಗಳು ಸೇರಿದಂತೆ ಮೂಲಸೌಕರ್ಯಗಳನ್ನು ಸುಧಾರಿಸಲಾಗುತ್ತಿದೆ. ಇದರ ಪರಿಣಾಮದಿಂದ ಸಾರ್ವಜನಿಕ ಗ್ರಹಿಕೆ ಬದಲಾಗುತ್ತಿದೆ ಮತ್ತು ಮತ್ತಷ್ಟು ಹೆಚ್ಚಿನ ಜನ ಆಡಳಿತದೊಂದಿಗೆ ಹೊಂದಾಣಿಕೆ ಮಾಡಿಕೊಳ್ಳುತ್ತಿದ್ದಾರೆ. ಈ ಶಿಬಿರಗಳ ಸ್ಥಾಪನೆಯು ಇಡೀ ಪ್ರದೇಶದ ಮೇಲೆ ಸಕಾರಾತ್ಮಕ ಪರಿಣಾಮ ಬೀರಿದೆ ಎಂದು ತಿಳಿಸಿದರು.
ಈ ಪೈಕಿ ಆರು ಮಾವೋವಾದಿಗಳ ತಲೆಯ ಮೇಲೆ ಒಟ್ಟು 11 ಲಕ್ಷ ರೂ. ಬಹುಮಾನ ಘೋಷಿಸಲಾಗಿತ್ತು. ಶರಣಾದ ಮಾವೋವಾದಿಗಳಲ್ಲಿ ಎಒಬಿ ವಿಭಾಗದ ಸದಸ್ಯರು, ತೆಲಂಗಾಣ ರಾಜ್ಯ ಸಮಿತಿ ಸದಸ್ಯರು ಮತ್ತು ಪ್ಲಟೂನ್ ಸದಸ್ಯರು ಸೇರಿದ್ದಾರೆ. ಬಿಜಾಪುರದಲ್ಲಿ ಈವರೆಗೆ 107 ಮಾವೋವಾದಿಗಳು ಶರಣಾಗಿದ್ದಾರೆ.
ಬಿಜಾಪುರ ಜಿಲ್ಲೆಯ ಗಂಗ್ಲೂರ್ ಪ್ರದೇಶದಲ್ಲಿ ಶುಕ್ರವಾರ ನಡೆದ ಎನ್ ಕೌಂಟರ್ನಲ್ಲಿ ಭದ್ರತಾ ಪಡೆಗಳು 14 ಮಹಿಳೆಯರು ಸೇರಿದಂತೆ 30 ಮಾವೋವಾದಿಗಳನ್ನು ಹತ್ಯೆಗೈದಿವೆ.
ಹತ್ಯೆಗೀಡಾದ ಈ ಮಾವೋವಾದಿಗಳ ತಲೆಯ ಮೇಲೆ ಒಟ್ಟು 87 ಲಕ್ಷ ರೂ.ಗಳ ಬಹುಮಾನ ಘೋಷಿಸಲಾಗಿತ್ತು. ಸೈನಿಕರು ಈ ಮಾವೋವಾದಿಗಳಿಂದ ಎಕೆ 47, ಎಸ್ಎಲ್ಆರ್, ಐಎನ್ಎಸ್ಎಎಸ್ ಮತ್ತು ರೈಫಲ್ಗಳಂತಹ ಮಾರಕ ಬಂದೂಕುಗಳನ್ನು ವಶಪಡಿಸಿಕೊಂಡಿದ್ದಾರೆ. ಇದಲ್ಲದೆ, ಸ್ಥಳೀಯ ರಾಕೆಟ್ ಲಾಂಚರ್, ಬ್ಯಾರೆಲ್ ಗ್ರೆನೇಡ್ ಲಾಂಚರ್ ಮತ್ತು ಇತರ ಸ್ಫೋಟಕ ಶಸ್ತ್ರಾಸ್ತ್ರಗಳನ್ನು ಸಹ ಸ್ಥಳದಿಂದ ವಶಪಡಿಸಿಕೊಳ್ಳಲಾಗಿದೆ. ದೊಡ್ಡ ಪ್ರಮಾಣದ ಕಾಡಿನ ಸಮವಸ್ತ್ರ, ಔಷಧಿಗಳು, ಸಾಹಿತ್ಯ ಮತ್ತು ದೈನಂದಿನ ಬಳಕೆಯ ಇತರ ವಸ್ತುಗಳು ಸಹ ಸ್ಥಳದಲ್ಲಿ ಪತ್ತೆಯಾಗಿವೆ.