ಹೊಸದಿಗಂತ ಡಿಜಿಟಲ್ ಡೆಸ್ಕ್:
ಮಲಯಾಳಂ ಚಿತ್ರರಂಗದ ಖ್ಯಾತ ನಿರ್ದೇಶಕ ರಂಜಿತ್ ಬಾಲಕೃಷ್ಣನ್ ವಿರುದ್ಧ ದಾಖಲಾದ ಅಸಹಜ ಲೈಂಗಿಕ ದೌರ್ಜನ್ಯ ಪ್ರಕರಣವನ್ನು ಕರ್ನಾಟಕ ಹೈಕೋರ್ಟ್ ರದ್ದುಗೊಳಿಸಿದೆ. ತಾನು ನಿರಪರಾಧಿ ಎಂದು ಹೈಕೋರ್ಟ್ನಲ್ಲಿ ಅರ್ಜಿ ಸಲ್ಲಿಸಿದ್ದ ರಂಜಿತ್ ಅವರ ಅರ್ಜಿಯನ್ನು ನ್ಯಾಯಮೂರ್ತಿ ಎಸ್.ಆರ್. ಕೃಷ್ಣಕುಮಾರ್ ಅಂಗೀಕರಿಸಿ ಪ್ರಕರಣವನ್ನೇ ವಜಾ ಮಾಡಿರುವ ತೀರ್ಪು ಹೊರಬಿದ್ದಿದೆ.
2024ರ ಅಕ್ಟೋಬರ್ನಲ್ಲಿ ಬೆಂಗಳೂರಿನ ಕೆಐಎಎಲ್ ಪೊಲೀಸ್ ಠಾಣೆಯಲ್ಲಿ ಮಹಿಳಾ ನಟಿಯೊಬ್ಬರು ರಂಜಿತ್ ವಿರುದ್ಧ ದೂರು ನೀಡಿದ್ದರು. ದೂರುದಾರರು 12 ವರ್ಷಗಳ ಹಿಂದೆ ತಾಜ್ ಹೋಟೆಲ್ನ ನಾಲ್ಕನೇ ಮಹಡಿಯಲ್ಲಿ ಘಟನೆ ನಡೆದಿದೆಯೆಂದು ಹೇಳಿದ್ದರು. ದೂರು ಪ್ರಕಾರ, ಐಪಿಸಿ ಸೆಕ್ಷನ್ 377 (ಅಸ್ವಾಭಾವಿಕ ಲೈಂಗಿಕ ಕೃತ್ಯ) ಹಾಗೂ ಐಟಿ ಕಾಯ್ದೆಯ ಸೆಕ್ಷನ್ 66ಇ ಅಡಿಯಲ್ಲಿ ಪ್ರಕರಣ ದಾಖಲಾಗಿತ್ತು.
ಆದರೆ, ಪ್ರಕರಣ ದಾಖಲಾಗಿರುವುದು 12 ವರ್ಷಗಳ ನಂತರವಾಗಿದ್ದು, ಎಫ್ಐಆರ್ ನೋಂದಾಯಿಸಲು ಯಾವುದೇ ಸಮರ್ಪಕ ಕಾರಣ ನೀಡಲಾಗಿಲ್ಲವೆಂದು ಹೈಕೋರ್ಟ್ ಹೇಳಿದೆ. ಹಿರಿಯ ವಕೀಲ ಪ್ರಭುಲಿಂಗ ನವದಗಿ ಅವರು ರಂಜಿತ್ ಪರವಾಗಿ ವಾದ ಮಂಡಿಸಿದ್ದು, ಘಟನೆ ಸಂಭವಿಸಿದ ಸ್ಥಳವನ್ನು ನಾಲ್ಕು ವರ್ಷಗಳ ಬಳಿಕ ಮಾತ್ರ ತೆರೆಯಲಾಗಿದೆ ಎಂಬ ಅಂಶವನ್ನು ನ್ಯಾಯಾಲಯ ಮುಂದಿಟ್ಟಿದ್ದರು.
ಈ ಹಿಂದೆ ನ್ಯಾಯಮೂರ್ತಿ ಎಂ. ನಾಗಪ್ರಸನ್ನ ಅವರು ಕೂಡ ಇದೇ ಪ್ರಕರಣದ ವಿಚಾರಣೆಗೆ ತಾತ್ಕಾಲಿಕ ತಡೆ ನೀಡಿದ್ದರು. ಇವುಗಳ ಆಧಾರದ ಮೇಲೆ ಹೈಕೋರ್ಟ್ ಪ್ರಕರಣವನ್ನು ಸಂಪೂರ್ಣವಾಗಿ ವಜಾ ಮಾಡಿದೆ.