ಹೊಸದಿಗಂತ ಡಿಜಿಟಲ್ ಡೆಸ್ಕ್:
ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಲಂಡನ್ನ ಆಕ್ಸ್ಫರ್ಡ್ ವಿಶ್ವವಿದ್ಯಾಲಯದಲ್ಲಿ ಭಾಷಣ ಮಾಡುತ್ತಿದ್ದಾಗ ವಿದ್ಯಾರ್ಥಿಗಳು ಪ್ರತಿಭಟನೆ ನಡೆಸಿ, ಅಡ್ಡಿಪಡಿಸಿದ ಘಟನೆ ನಡೆದಿದೆ.
ಇಲ್ಲಿನ ಕೆಲ್ಲಾಗ್ ಕಾಲೇಜಿನಲ್ಲಿ ಸಿಎಂ ಮಮತಾ ‘ಬಂಗಾಳದಲ್ಲಿ ಮಹಿಳಾ ಸಬಲೀಕರಣ ಮತ್ತು ಅದರ ಯಶಸ್ಸುʼ ವಿಚಾರದ ಬಗ್ಗೆ ಭಾಷಣ ಮಾಡುತ್ತಿದ್ದರು. ಈ ವೇಳೆ ಪೋಸ್ಟರ್ ಹಿಡಿದು ಎವಿದ್ಯಾರ್ಥಿಗಳು ನಿಂತು 2023ರ ಸ್ಥಳೀಯ ಚುನಾವಣೆ ವೇಳೆ ಟಿಎಂಸಿ ನಡೆಸಿರುವ ಹಿಂಸಾಚಾರದಲ್ಲಿ 60 ಜನರು ಸಾವನ್ನಪ್ಪಿದ್ದಾರೆ, ನೂರಾರು ಜನರು ಗಾಯಗೊಂಡಿದ್ದಾರೆ. ಆರ್.ಜಿ.ಕರ್ ಕಾಲೇಜಿನ ಅತ್ಯಾಚಾರ. ಬಂಗಾಳದಲ್ಲಿ ಹೆಣ್ಮು ಮಕ್ಕಳಿಗೆ ರಕ್ಷಣೆ ಇಲ್ಲ. ಬಂಗಾಳಕ್ಕೆ ಹಿಂತಿರುಗಿ ಎಂಬ ಘೋಷಣೆಗಳನ್ನು ಕೂಗುತ್ತಾ ಮೂಲಕ ಭಾಷಣಕ್ಕೆ ಅಡ್ಡಿಪಡಿಸಿದರು.ಆದ್ರೆ ಪ್ರತಿಭಟನೆಗೆ ಕ್ಯಾರೆ ಎನ್ನದ ಮಮತಾ ಅವರು, ಶಾಂತಚಿತ್ತದಿಂದ ತಮ್ಮ ಭಾಷಣವನ್ನು ಮುಂದುವರೆಸಿದರು.
ಇದನ್ನು ರಾಜಕೀಯ ವೇದಿಕೆಯನ್ನಾಗಿ ಮಾಡಬೇಡಿ. ಬಂಗಾಳಕ್ಕೆ ಹೋಗಿ ನಿಮ್ಮ ಪಕ್ಷ ಬಲಪಡಿಸಿಕೊಂಡು ಹೋರಾಟ ಮುಂದುವರೆಸಿ, ಆಗ ನೀವು ನಮ್ಮೊಂದಿಗೆ ಹೋರಾಡಬಹುದು. ನನ್ನನ್ನು ಅವಮಾನಿಸುವ ಮೂಲಕ ನಿಮ್ಮ ಸಂಸ್ಥೆಗೆ ಅವಮಾನ ಮಾಡಬೇಡಿ. ನಾನು ದೇಶದ ಪ್ರತಿನಿಧಿಯಾಗಿ ಇಲ್ಲಿಗೆ ಬಂದಿದ್ದೇನೆ. ನಿಮ್ಮ ದೇಶವನ್ನು ಅವಮಾನಿಸಬೇಡಿ. ಆರ್ಜಿ ಕರ್ ಕಾಲೇಜಿನ ಕೇಸ್ ಕೇಂದ್ರ ಸರ್ಕಾರದ ಕೈಲಿದೆ. ನಮ್ಮ ಕೈಲಿ ಏನು ಇಲ್ಲ ಎಂದು ಪ್ರತಿಭಟನಾಕಾರರಿಗೆ ಹೇಳಿದರು.
ನಂತರ ಪ್ರತಿಭಟನಾಕಾರರನ್ನು ಆಯೋಜಕರು ಹೊರಗಡೆ ಕಳುಹಿಸಿದರು. ಬಳಿಕ ಮಾತು ಮುಂದುವರಿಸಿದ ದೀದಿ , ನನ್ನನ್ನು ಮತ್ತೆ ಮತ್ತೆ ಇಲ್ಲಿಗೆ ಬರಲು ಪ್ರೋತ್ಸಾಹಿಸಿದ್ದೀರಿ. ನೆನಪಿಡಿ, ದೀದಿಗೆ ಯಾರ ಬಗ್ಗೆಯೂ ಭಯವಿಲ್ಲ. ದೀದಿ ರಾಯಲ್ ಬೆಂಗಾಲ್ ಟೈಗರ್ನಂತೆ ನಡೆಯುತ್ತಾಳೆ. ಸಾಧ್ಯವಾದರೆ ನನ್ನನ್ನು ಹಿಡಿಯಲು ಪ್ರಯತ್ನಿಸಿ ಎಂದು ಹೇಳಿದರು.