ರಾಮಲಲಾ ನ ಪ್ರಾಣಪ್ರತಿಷ್ಠಾಪನೆಯಲ್ಲಿ ಮೊಳಗಲಿದೆ 50ಕ್ಕೂ ಹೆಚ್ಚು ವಾದ್ಯಗಳಿಂದ ಮಂಗಳ ನಾದ!

ಹೊಸದಿಗಂತ ಡಿಜಿಟಲ್ ಡೆಸ್ಕ್:

ರಾಮಮಂದಿರದಲ್ಲಿ (Ram Mandir) ರಾಮಲಲಾ ನ ಪ್ರಾಣಪ್ರತಿಷ್ಠಾಪನೆ (Pran Pratishtha) ಸಮಾರಂಭದಲ್ಲಿ ದೇಶದ ಬೇರೆ ಬೇರೆ ಭಾಗಗಳ 50ಕ್ಕೂ ಹೆಚ್ಚು ಸಾಂಪ್ರದಾಯಿಕ ವಾದ್ಯಗಳಿಂದ ಮಂಗಳ ನಾದ ಹೊರಹೊಮ್ಮಲಿದೆ.

ಖ್ಯಾತ ಕವಿ ಯತೀಂದ್ರ ಮಿಶ್ರಾ ಅವರಿಂದ ಆಯೋಜಿಸಲ್ಪಟ್ಟ ಈ ಭವ್ಯವಾದ ಸಂಗೀತ ಕಾರ್ಯಕ್ರಮಕ್ಕೆ ದೆಹಲಿಯ ಸಂಗೀತ ನಾಟಕ ಅಕಾಡೆಮಿ ಬೆಂಬಲ ನೀಡಿದೆ.

ಸಂಗೀತ ಕಾರ್ಯಕ್ರಮ ಬೆಳಿಗ್ಗೆ 10 ಗಂಟೆಗೆ ಪ್ರಾರಂಭವಾಗಲಿದೆ. ಎರಡು ಗಂಟೆಗಳ ಕಾಲ ಈ ಕಾರ್ಯಕ್ರಮ ನಡೆಯಲಿದ್ದು, ಬಳಿಕರಾಮನ ಪ್ರಾಣಪ್ರತಿಷ್ಠಾಪನೆ ನೆರವೇರಲಿದೆ. ವಾದ್ಯಗಳಲ್ಲಿ ಉತ್ತರ ಪ್ರದೇಶದ ಪಖಾವಾಜ್, ಕೊಳಲು ಮತ್ತು ಧೋಲಕ್, ಕರ್ನಾಟಕದ ವೀಣೆ, ಪಂಜಾಬ್‍ನಿಂದ ಅಲ್ಗೋಜಾ, ಮಹಾರಾಷ್ಟ್ರದಿಂದ ಸುಂದರಿ, ಒಡಿಶಾದಿಂದ ಮರ್ದಲ, ಮಧ್ಯಪ್ರದೇಶದಿಂದ ಸಂತೂರ್, ಮಣಿಪುರದಿಂದ ಪುಂಗ್, ಅಸ್ಸಾಂನಿಂದ ನಾಗದಾ ಮತ್ತು ಕಾಳಿ, ಛತ್ತೀಸ್‍ಗಢದಿಂದ ತಂಬೂರ, ದೆಹಲಿಯಿಂದ ಶೆಹನಾಯಿ, ರಾಜಸ್ಥಾನದಿಂದ ರಾವಣಹತ, ಪಶ್ಚಿಮ ಬಂಗಾಳದಿಂದ ಶ್ರೀಖೋಲ್ ಮತ್ತು ಸರೋದ್, ಆಂಧ್ರಪ್ರದೇಶದಿಂದ ಘಟಂ, ಜಾರ್ಖಂಡ್‍ನಿಂದ ಸಿತಾರ್, ಗುಜರಾತ್‍ನಿಂದ ಸಾಂತರ್, ಬಿಹಾರದಿಂದ ಪಖಾವಾಜ್, ಉತ್ತರಾಖಂಡದಿಂದ ಹುಡ್ಕ ಮತ್ತು ತಮಿಳುನಾಡಿನಿಂದ ನಾಗಸ್ವರಂ, ತವಿಲ್ ಮತ್ತು ಮೃದಂಗಮ್ ಸಹ ಇರಲಿದೆ ಎಂದು ರಾಮಜನ್ಮಭೂಮಿ ತೀರ್ಥಕ್ಷೇತ್ರ ಟ್ರಸ್ಟ್ ತಿಳಿಸಿದೆ.

ವಿವಿಧ ರಾಜ್ಯಗಳಿಂದ ಸುಮಾರು 50ಕ್ಕೂ ಹೆಚ್ಚು ವಾದ್ಯಗಳು ಈ ಶುಭ ಸಮಾರಂಭದಲ್ಲಿ ಮಂಗಳಕರ ನಾದವನ್ನು ಹೊಮ್ಮಿಸಲಿವೆ. ಇದು ವಿವಿಧ ರಾಜ್ಯಗಳ ವೈವಿಧ್ಯಮಯ ಸಂಸ್ಕೃತಿಯನ್ನು ಒಟ್ಟುಗೂಡಿಸಲಿದೆ ಎಂದು ಟ್ರಸ್ಟ್‌ನ ಸದಸ್ಯರೊಬ್ಬರು ತಿಳಿಸಿದ್ದಾರೆ.

 

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!