ಹೊಸದಿಗಂತ ಡಿಜಿಟಲ್ ಡೆಸ್ಕ್:
ಪ್ರತೀ ಬಾರಿ ಮಾವಿನ ತಳಿಗೆ ಖ್ತಾನಾಮರ ಹೆಸರನ್ನಿಡುವ ಉತ್ತರ ಪ್ರದೇಶದ ಲಖನೌನ ’ಮ್ಯಾಂಗೋ ಮ್ಯಾನ್’ ಖ್ಯಾತಿಯ ಕಲಿಮುಲ್ಲಾ ಖಾನ್, ಈ ಬಾರಿ ತಾವು ಬೆಳೆದ ಹೊಸ ಬಗೆಯ ಮಾವಿನ ತಳಿಗೆ ರಕ್ಷಣಾ ಸಚಿವ ರಾಜನಾಥ ಸಿಂಗ್ ಅವರ ಹೆಸರಿಟ್ಟಿದ್ದಾರೆ.
ಹೊಸ ಮಾವಿನ ತಳಿ ಬಗ್ಗೆ ಮಾತನಾಡಿರುವ ಖಾನ್, ಮುಂದಿನ ತಲೆಮಾರುಗಳವರೆಗೂ ಅವರ ಹೆಸರು ಉಳಿಯಲಿ ಎಂಬ ಕಾರಣಕ್ಕೆ ದೇಶಕ್ಕೆ ಅರ್ಥಪೂರ್ಣ ಕೊಡುಗೆ ನೀಡಿದ ವ್ಯಕ್ತಿಗಳ ಹೆಸರನ್ನು ನನ್ನ ಮಾವಿನ ತಳಿಗೆ ಇಡುತ್ತೇನೆ. ಇದರಿಂದ ಮಾವಿನ ಹೆಸರನ್ನು ಕೇಳಿದಾಗ ಅವರ ಹೆಸರಿನೊಂದಿಗೆ ಅವರು ಮಾಡಿದ ಉತ್ತಮ ಕೆಲಸಗಳು ನೆನಪಿಗೆ ಬರುತ್ತವೆ ಎಂದು ಹೇಳಿದ್ದಾರೆ.
ರಾಜನಾಥ ಸಿಂಗ್ ಅವರು ಚಿಂತನಾಶೀಲ ವ್ಯಕ್ತಿ. ಅವರು ಪ್ರಾಮಾಣಿಕವಾಗಿ ಶಾಂತಿ ಬಯಸುತ್ತಾರೆಯೇ ಹೊರತು ಯುದ್ಧವನ್ನಲ್ಲ ಎಂಬುದು ಪಾಕಿಸ್ತಾನ ಕುರಿತ ಚರ್ಚೆಯ ವೇಳೆ ತಿಳಿಯಿತು. ಹಾಗಾಗಿಯೇ, ಹೊಸ ತಳಿಗೆ ಅವರ ಹೆಸರಿಟ್ಟಿದ್ದೇನೆ ಎಂದೂ ಅವರು ಹೇಳಿದ್ದಾರೆ.
ಖಾನ್ ಈಗಾಗಲೇ ತಮ್ಮ ಮಾವಿನ ತಳಿಗಳಿಗೆ ಸಚಿನ್ ತೆಂಡೂಲ್ಕರ್, ಐಶ್ವರ್ಯಾ ರೈ, ಅಖಿಲೇಶ್ ಯಾದವ್, ಸೋನಿಯಾ ಗಾಂಧಿ, ನರೇಂದ್ರ ಮೋದಿ, ಅಮಿತ್ ಶಾ ಮೊದಲಾದ ಹಲವರ ಹೆಸರುಗಳನ್ನು ಇಟ್ಟಿದ್ದಾರೆ.
ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ