ಹೊಸದಿಗಂತ ವರದಿ ಅಂಕೋಲಾ:
ರಾಷ್ಟ್ರೀಯ ಹೆದ್ದಾರಿಯಲ್ಲಿ ಸಾಗಿಸುತ್ತಿದ್ದ ಮಾರುತಿ ಓಮಿನಿ ವಾಹನಕ್ಕೆ ಬೆಂಕಿ ಹೊತ್ತಿಕೊಂಡ ಪರಿಣಾಮ ವಾಹನ ಸಂಪೂರ್ಣ ಸುಟ್ಟು ಕರಕಲಾದ ಘಟನೆ ತಾಲೂಕಿನ ಬಾಳೇಗುಳಿ ಬಳಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಸಂಭವಿಸಿದೆ.
ಮುರುಡೇಶ್ವರ ಬಸ್ತಿಮಕ್ಕಿ ನಿವಾಸಿ ನೌಶಾದ್ ಪಟೇಲ್ ಎನ್ನುವವರು ತಮ್ಮ ಸಹೋದರನ ಮಾಲಿಕತ್ವದ ಓಮಿನಿ ವಾಹನದಲ್ಲಿ ಗೋವಾ ಕಡೆ ತೆರಳುತ್ತಿದ್ದ ಸಂದರ್ಭದಲ್ಲಿ ಬಾಳೇಗುಳಿ ಬರುತ್ತಿದ್ದಂತೆ ಹೊಗೆ ಕಂಡು ಬಂದಿದ್ದು ಅವರು ವಾಹನ ನಿಲ್ಲಿಸಿ ಕೆಳಗೆ ಇಳಿಯುತ್ತಿದ್ದಂತೆ ಬೆಂಕಿ ಹೊತ್ತಿ ಉರಿದಿದೆ.
ಬೆಂಕಿ ಜ್ವಾಲೆಗೆ ವಾಹನ ಹೊತ್ತಿ ಉರಿದಿದ್ದು ಸ್ಥಳೀಯ ಅಗ್ನಿಶಾಮಕ ದಳದ ಸಿಬ್ಬಂದಿಗಳು ಸ್ಥಳಕ್ಕೆ ಆಗಮಿಸಿ ಬೆಂಕಿ ಆರಿಸುವ ಪ್ರಯತ್ನ ನಡೆಸಿದರೂ ಬೆಂಕಿ ನಿಯಂತ್ರಣಕ್ಕೆ ಬಾರದೇ ಹರ ಸಾಹಸ ಪಡುವಂತಾಗಿದೆ. ಅಗ್ನಿಶಾಮಕ ವಾಹನದಲ್ಲಿದ್ದ ನೀರು ಮುಗಿದು ಸ್ಥಳೀಯ ನಿವಾಸಿಯೊಬ್ಬರ ಬಾವಿಯಿಂದ ನೀರು ಪಡೆದು ಬೆಂಕಿ ಆರಿಸುವ ಕೆಲಸ ಮಾಡಲಾಗಿದೆ.
ಅಂಕೋಲಾ ಪಿ.ಎಸ್.ಐ ಉದ್ದಪ್ಪ ಮತ್ತು ಸಿಬ್ಬಂದಿಗಳು ಸ್ಥಳಕ್ಕೆ ಭೇಟಿ ನೀಡಿ ಕೆಲ ಕಾಲ ರಸ್ತೆ ವಾಹನ ಸಂಚಾರ ಸ್ಥಗಿತಗೊಳಿಸಿ ಬದಲಿ ಮಾರ್ಗದ ವ್ಯವಸ್ಥೆ ಮಾಡಿಕೊಡುವ ಮೂಲಕ ಬೆಂಕಿ ಆರಿಸುವ ಕಾರ್ಯಾಚರಣೆಗೆ ಸಹಕರಿಸಿದರು.