ಹೊಸದಿಗಂತ ಡಿಜಿಟಲ್ ಡೆಸ್ಕ್:
ಧರ್ಮಸ್ಥಳ ಪ್ರಕರಣಕ್ಕೆ ಸಂಬಂಧಿಸಿ ಇದೇ ಮೊದಲ ಬಾರಿಗೆ ತಮಿಳುನಾಡು ಬಿಜೆಪಿ ಮಾಜಿ ಅಧ್ಯಕ್ಷ ಅಣ್ಣಾಮಲೈ ಪ್ರತಿಕ್ರಿಯೆ ನೀಡಿದ್ದು, ಒಬ್ಬ ಮಾಸ್ಕ್ ಧರಿಸಿದ ವ್ಯಕ್ತಿ ಸರ್ಕಾರಿ ಆಡಳಿತ ಯಂತ್ರವನ್ನು ಒಂದು ತಿಂಗಳಿಗೂ ಹೆಚ್ಚು ಕಾಲ ಹಗುರವಾಗಿ ಬಳಸಿಕೊಂಡಿರುವ ಬಗ್ಗೆ ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದಾರೆ.
ಇದು ಕೇವಲ ಒಬ್ಬ ವ್ಯಕ್ತಿಯ ಕೈವಾಡ ಅಲ್ಲ, ಇದರ ಹಿಂದೆ ಇನ್ನೂ ಬಹಿರಂಗಪಡಿಸದ ದೊಡ್ಡ ಪಿತೂರಿ ಅಡಗಿದೆ. ಕರ್ನಾಟಕದ ಕಾಂಗ್ರೆಸ್ ಸರ್ಕಾರ, ಮಾಸ್ಕ್ ಧರಿಸಿದ ವ್ಯಕ್ತಿಯ ಆಧಾರರಹಿತ ಆರೋಪಗಳನ್ನು ಪ್ರಾಥಮಿಕ ಪುರಾವೆಯೂ ಇಲ್ಲದೆ ಮಾನ್ಯ ಮಾಡಿ ಕಾನೂನು ಬದ್ಧತೆ ನೀಡಿದ್ದು ಆಶ್ಚರ್ಯ ಮೂಡಿಸಿದೆ ಎಂದು ಅವರು ಹೇಳಿದ್ದಾರೆ.
ಇಲ್ಲಿ ಸರ್ಕಾರವನ್ನು ಮೋಸಗೊಳಿಸಲಾಗಿದೆ. ಈ ಘಟನೆಯು ಧರ್ಮಸ್ಥಳ ದೇವಾಲಯವನ್ನು ಅಪಖ್ಯಾತಿಗೊಳಿಸುವ ದೊಡ್ಡ ಪಿತೂರಿ ಭಾಗ. ಈ ನಡುವೆ ಸುಜಾತಾ ಭಟ್ ಎಂಬ ಮಹಿಳೆ, ತನ್ನ ಮಗಳು ಕಾಣೆಯಾಗಿದ್ದಾಳೆ ಎಂದು ಸುಳ್ಳು ದೂರು ದಾಖಲಿಸುವಂತೆ ಒತ್ತಾಯಿಸಲಾಯಿತು. ಅದು ಕೂಡಾ ಗೊಂದಲದಿಂದ ಕೂಡಿದೆ. ಈ ಪ್ರಕರಣದ ಹಿಂದಿನ ನಿಜವಾದ ಸೂತ್ರಧಾರಿಗಳನ್ನು ಬೆಳಕಿಗೆ ತರಬೇಕು, ಅವರನ್ನು ಹೊಣೆಗಾರರನ್ನಾಗಿ ಮಾಡಬೇಕು ಎಂದು ಅವರು ಆಗ್ರಹಿಸಿದ್ದಾರೆ.