Friday, December 19, 2025

ರಾಜ್ಯ ವಿಪತ್ತು ನಿರ್ವಹಣಾ ವ್ಯವಸ್ಥೆಯಲ್ಲಿ ಭಾರೀ ಅಕ್ರಮ? ಸಿಎಜಿ ವರದಿಯಲ್ಲೇನಿದೆ?

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:

ರಾಜ್ಯದ ವಿಪತ್ತು ನಿರ್ವಹಣಾ ವ್ಯವಸ್ಥೆಯಲ್ಲಿ ಗಂಭೀರ ಲೋಪಗಳಿವೆ ಎಂದು ಭಾರತದ ಲೆಕ್ಕ ನಿಯಂತ್ರಕರು ಮತ್ತು ಮಹಾ ಲೆಕ್ಕಪರಿಶೋಕರ ವರದಿ ಬಹಿರಂಗಪಡಿಸಿದೆ.

ಯೋಜನೆ, ಸಿಬ್ಬಂದಿ ನೇಮಕ, ಮೂಲಸೌಕರ್ಯ ಹಾಗೂ ನಿಧಿ ಬಳಕೆಯಲ್ಲಿ ಅನೇಕ ಲೋಕಗಳಿವೆ ಎಂದು ವರದಿ ತಿಳಿಸಿದೆ. ಈ ವರದಿಯನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಪರವಾಗಿ ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಎಚ್.ಕೆ.ಪಾಟೀಲ್ ಅವರು ವಿಧಾನಸಭೆಯಲ್ಲಿ ಮಂಡಿಸಿದರು.

ಪ್ರಾಕೃತಿಕ ವಿಪತ್ತುಗಳ ಪ್ರಮಾಣ ಹೆಚ್ಚುತ್ತಿರುವ ಹಿನ್ನೆಲೆ ರಾಜ್ಯದ ವಿಪತ್ತು ಅಪಾಯ ನಿರ್ವಹಣೆಯ ಸಿದ್ಧತೆಯನ್ನು ಸಿಎಜಿ ಪರಿಶೀಲಿಸಿದೆ. 2017–18ರಿಂದ 2022–23ರ ಅವಧಿಯ ಕರ್ನಾಟಕದ ವಿಪತ್ತು ನಿರ್ವಹಣಾ ಸಿದ್ಧತೆಯನ್ನು ಸಿಎಜಿ ಪರಿಶೀಲಿಸಿದ್ದು, 2008ರಲ್ಲಿ ಕರ್ನಾಟಕ ರಾಜ್ಯ ವಿಪತ್ತು ನಿರ್ವಹಣಾ ಪ್ರಾಧಿಕಾರ ಸ್ಥಾಪನೆಯಾದರೂ, ರಾಜ್ಯ ವಿಪತ್ತು ನಿರ್ವಹಣಾ ನೀತಿಯನ್ನು 12 ವರ್ಷಗಳ ನಂತರ ಮಾತ್ರ ಅಧಿಸೂಚನೆ ಮಾಡಲಾಗಿದೆ ಎಂದು ವರದಿ ಉಲ್ಲೇಖಿಸಿದೆ.

ರಾಜ್ಯ ತುರ್ತು ಕಾರ್ಯಾಚರಣೆ ಕೇಂದ್ರದಲ್ಲಿ ಅಗತ್ಯವಾದ ಮಾನವ ಸಂಪನ್ಮೂಲ ಮತ್ತು ಮೂಲಸೌಕರ್ಯದ ಕೊರತೆಯಿದ್ದು, ಇದು ವ್ಯವಸ್ಥೆಯ ಕಾರ್ಯಕ್ಷಮತೆ ಮೇಲೆ ದುಷ್ಪರಿಣಾಮ ಬೀರಿದೆ. ವಿಪತ್ತು ಪ್ರತಿಕ್ರಿಯಾ ಪಡೆಗಳಲ್ಲೂ ತೀವ್ರ ಸಿಬ್ಬಂದಿ ಕೊರತೆ ಕಂಡುಬಂದಿದ್ದು, ಮಂಜೂರಾದ ಹುದ್ದೆಗಳ ಪೈಕಿ ಶೇ.67ರಿಂದ ಶೇ.96 ಹುದ್ದೆಗಳು ಖಾಲಿಯಾಗಿವೆ.

2009ರಿಂದ 2015ರ ಅವಧಿಯಲ್ಲಿ ಕರ್ನಾಟಕ ರಾಜ್ಯ ನೈಸರ್ಗಿಕ ವಿಪತ್ತು ನಿಗಾವಹಿಸುವ ಕೇಂದ್ರ ಸ್ಥಾಪಿಸಿದ್ದ ಟೆಲಿಮೆಟ್ರಿಕ್ ಮಳೆ ಮಾಪಕಗಳು ಮತ್ತು ಟೆಲಿಮೆಟ್ರಿಕ್ ಹವಾಮಾನ ಕೇಂದ್ರಗಳು ಬಹುತೇಕ ಕಾರ್ಯನಿರ್ವಹಿಸದ ಸ್ಥಿತಿಯಲ್ಲಿವೆ ಎಂದು ಸಿಎಜಿ ತಿಳಿಸಿದೆ.

error: Content is protected !!