Friday, October 24, 2025

ರಾಜ್ಯ ಸುಭಿಕ್ಷೆ, ಜನತೆಗೆ ಶಾಂತಿ ನೆಮ್ಮದಿ ಕರುಣಿಸಲಿ: ಹಾಸನಾಂಬೆ ಸನ್ನಿಧಿಯಲ್ಲಿ ಸಿಎಂ ಪ್ರಾರ್ಥನೆ

ಹೊಸದಿಗಂತ ಹಾಸನ:

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಇಂದು ಶ್ರೀ ಹಾಸನಾಂಬ ದೇವಿ ಮತ್ತು ಶ್ರೀ ಸಿದ್ದೇಶ್ವರ ಸ್ವಾಮಿ ದರ್ಶನ ಪಡೆದ ನಂತರ, ರಾಜ್ಯದ ಸುಭಿಕ್ಷೆ, ಶಾಂತಿ ಮತ್ತು ನೆಮ್ಮದಿಗಾಗಿ ದೇವರಲ್ಲಿ ಪ್ರಾರ್ಥಿಸಿರುವುದಾಗಿ ತಿಳಿಸಿದರು. ದೇವಿಯ ದರ್ಶನದ ನಂತರ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಈ ವರ್ಷ ಉತ್ತಮ ಮಳೆ ಬೆಳೆಯಾಗಲಿ ಮತ್ತು ರೈತರು ಸಮೃದ್ಧರಾಗಲಿ ಎಂದು ಹಾರೈಸಿದ್ದಾಗಿ ತಿಳಿಸಿದರು.

ಪ್ರವಾಹ ಪರಿಹಾರ ಮತ್ತು ರೈತರಿಗೆ ಆರ್ಥಿಕ ನೆರವು

ಈ ಕುರಿತು ಮಾತನಾಡಿದ ಸಿಎಂ, ಅದೃಷ್ಟವಶಾತ್ ರಾಜ್ಯದಲ್ಲಿ ಉತ್ತಮ ಮಳೆಯಾಗಿದೆ ಮತ್ತು ಜಲಾಶಯಗಳು ತುಂಬಿವೆ. ಆದರೆ, ಕೆಲವು ಪ್ರದೇಶಗಳಲ್ಲಿ ಪ್ರವಾಹದಿಂದ ಬೆಳೆ ನಷ್ಟ ಉಂಟಾಗಿದೆ. ರೈತರಿಗೆ ನೆರವಾಗಲು ಸರ್ಕಾರ ಬದ್ಧವಾಗಿದೆ. ಎನ್.ಡಿ.ಆರ್.ಎಫ್ ಮತ್ತು ಸರ್ಕಾರಿ ಯೋಜನೆಯಡಿ ಬೆಳೆ ಹಾನಿ ಪರಿಹಾರದ ವಿವರಗಳನ್ನು ನೀಡಿದರು:

  • ಖುಷ್ಕಿ ಬೆಳೆ (ಒಣ ಬೇಸಾಯ): ಪ್ರತಿ ಹೆಕ್ಟೇರ್‌ಗೆ ₹೧೭,೦೦೦
  • ನೀರಾವರಿ ಬೆಳೆ: ಪ್ರತಿ ಹೆಕ್ಟೇರ್‌ಗೆ ₹೨೫,೫೦೦
  • ಬಹು ಬೆಳೆ: ಪ್ರತಿ ಹೆಕ್ಟೇರ್‌ಗೆ ₹೩೧,೦೦೦

ಮುಂದಿನ ವರ್ಷ ಯಾವುದೇ ಹಾನಿಯಾಗದಂತೆ ಮತ್ತು ರೈತರು ಬೆಳೆದ ಬೆಳೆ ಕೈಗೆ ಸಿಗುವಂತೆ ದೇವರಲ್ಲಿ ಪ್ರಾರ್ಥಿಸಿರುವುದಾಗಿ ತಿಳಿಸಿದರು.

‘ಸರ್ವ ಜನಾಂಗದ ಶಾಂತಿಯ ತೋಟ’ದ ಕನಸು

ಹಾಸನಾಂಬ ದರ್ಶನಕ್ಕೆ ರಾಜ್ಯದಾದ್ಯಂತ ಜನರು ಆಗಮಿಸುತ್ತಿದ್ದು, ಪ್ರತಿಯೊಬ್ಬರೂ ದೇವಿಯ ದರ್ಶನ ಪಡೆಯಬೇಕು ಮತ್ತು ಯಾರೂ ನಿರಾಸೆಯಿಂದ ಹೋಗಬಾರದು ಎಂದು ಸಿಎಂ ಸಿದ್ದರಾಮಯ್ಯ ತಿಳಿಸಿದರು. “ಸಮಾಜದಲ್ಲಿ ಎಲ್ಲರೂ ಪರಸ್ಪರ ಪ್ರೀತಿಯಿಂದ ಬಾಳಲಿ, ಯಾರನ್ನೂ ದ್ವೇಷಿಸಬಾರದು, ಇದು ಎಲ್ಲ ಧರ್ಮಗಳ ಮೂಲ ಸಂದೇಶವಾಗಿದೆ” ಎಂದರು.

ಕುವೆಂಪು ಅವರ ಆಶಯದಂತೆ, ರಾಜ್ಯದ ಜನತೆಗೆ ಉತ್ತಮ ಆಯುಷ್ಯ, ಆರೋಗ್ಯ, ಶಾಂತಿ ಮತ್ತು ನೆಮ್ಮದಿ ದೊರೆಯಲಿ ಹಾಗೂ “ಸರ್ವ ಜನಾಂಗದ ಶಾಂತಿಯ ತೋಟ”ದಂತೆ ಬಾಳಲು ಎಲ್ಲರಿಗೂ ಬುದ್ಧಿ ನೀಡಲಿ ಎಂದು ಪ್ರಾರ್ಥಿಸುವುದಾಗಿ ತಿಳಿಸಿದರು. ಏಳು ಕೋಟಿ ಜನರಿಗೂ ಒಳ್ಳೆಯದಾಗಲಿ ಎಂದು ಹಾರೈಸಿದರು.


ದಾಖಲೆಯತ್ತ ಹಾಸನಾಂಬ ದರ್ಶನ: 8.84 ಲಕ್ಷ ಭಕ್ತರ ಆಗಮನ, ಸಾಮಾನ್ಯ ಭಕ್ತರಿಗೆ ಹೆಚ್ಚಿನ ಆದ್ಯತೆ

ಕಂದಾಯ ಸಚಿವ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಕೃಷ್ಣ ಬೈರೇಗೌಡ ಅವರು ದೇವಸ್ಥಾನದ ಆವರಣದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿ, ಈ ಬಾರಿ ಭಕ್ತರ ದಟ್ಟಣೆ ಹೆಚ್ಚಿರುವುದಾಗಿ ತಿಳಿಸಿದರು.

“ಇಂದು ಬೆಳಗ್ಗೆ ೫ ಗಂಟೆಯವರೆಗೆ ೮,೮೪,೫೦೩ ಜನರು ದೇವಿ ದರ್ಶನ ಪಡೆದಿದ್ದಾರೆ. ಭಕ್ತರ ಸಂಖ್ಯೆ ದುಪ್ಪಟ್ಟಾಗಿರುವುದರಿಂದ ದರ್ಶನಕ್ಕೆ ಸರಾಸರಿ ೩ ರಿಂದ ೪ ಗಂಟೆ ಸಮಯ ತೆಗೆದುಕೊಳ್ಳುತ್ತಿದೆ. ಆದಾಗ್ಯೂ, ಎಲ್ಲರಿಗೂ ಸುಗಮ ದರ್ಶನ ಆಗುತ್ತಿದೆ” ಎಂದು ತಿಳಿಸಿದರು.

ವ್ಯವಸ್ಥೆ ಮತ್ತು ಮಹಿಳಾ ಭಕ್ತರ ಪಾಲು

ನಾಡಿನ ಮೂಲೆ ಮೂಲೆಗಳಿಂದ ಭಕ್ತರು ಆಗಮಿಸುತ್ತಿದ್ದು, ಇವರಲ್ಲಿ ಶೇಕಡಾ ೭೦ರಷ್ಟು ಮಹಿಳಾ ಭಕ್ತರೇ ಇದ್ದಾರೆ. ಮಂಗಳವಾರವಂತೂ ಶೇಕಡಾ ೮೦ರಷ್ಟು ಮಹಿಳೆಯರು ದರ್ಶನ ಪಡೆದಿದ್ದಾರೆ ಎಂದು ಅವರು ಮಾಹಿತಿ ನೀಡಿದರು.

ಭಕ್ತರಿಗಾಗಿ ಅಗತ್ಯ ಸಿದ್ಧತೆಗಳನ್ನು ಮಾಡಲಾಗಿದೆ. ಧರ್ಮದರ್ಶನದಲ್ಲಿ ಆಗಮಿಸುವ ಭಕ್ತಾದಿಗಳಿಗೆ ಕುಡಿಯುವ ನೀರು, ಮಜ್ಜಿಗೆ, ವಾಟರ್ ಪ್ರೂಫ್ ಟೆಂಟ್, ಮತ್ತು ೧೨೪ ಶೌಚಾಲಯಗಳ ವ್ಯವಸ್ಥೆ ಕಲ್ಪಿಸಲಾಗಿದೆ.

“ಈ ಬಾರಿ ಶ್ರೀ ಸಾಮಾನ್ಯರಿಗೆ ಹೆಚ್ಚಿನ ಆದ್ಯತೆ ನೀಡಲಾಗಿದೆ. ಮುಖ್ಯಮಂತ್ರಿಗಳ ಸೂಚನೆಯಂತೆ ಸಾಮಾನ್ಯ ಜನರಿಗೆ ದರ್ಶನಕ್ಕೆ ಹೆಚ್ಚಿನ ಅವಕಾಶ ಕಲ್ಪಿಸಲು ಶಿಸ್ತುಬದ್ಧವಾಗಿ ಕ್ರಮ ಕೈಗೊಳ್ಳಲಾಗಿದೆ. ಪಕ್ಷಾತೀತವಾಗಿ ಎಲ್ಲ ಜನಪ್ರತಿನಿಧಿಗಳು ಸಹಕಾರ ನೀಡಿದ್ದಾರೆ” ಎಂದು ಸಚಿವರು ವಿವರಿಸಿದರು.

ಈ ಸಂದರ್ಭದಲ್ಲಿ ಮುಜರಾಯಿ ಸಚಿವರಾದ ರಾಮಲಿಂಗಾರೆಡ್ಡಿ, ಶಾಸಕ ಕೆ.ಎಂ.ಶಿವಲಿಂಗೇಗೌಡ, ಸಂಸದ ಶ್ರೇಯಸ್ ಎಂ ಪಟೇಲ್, ಜಿಲ್ಲಾಧಿಕಾರಿ ಲತಾ ಕುಮಾರಿ ಸೇರಿದಂತೆ ಹಲವು ಅಧಿಕಾರಿಗಳು ಉಪಸ್ಥಿತರಿದ್ದರು.

error: Content is protected !!