ಹೊಸದಿಗಂತ ಡಿಜಿಟಲ್ ಡೆಸ್ಕ್:
ಬೆಂಗಳೂರು ನಗರದ ರಸ್ತೆಗಳಲ್ಲಿ ಹೇಗೆ ಬೇಕೋ ಹಾಗೆ ನಿಂತಿದ್ದ ಅನಾಥ ವಾಹನಗಳು ಹಾಗೂ ಅಡ್ಡಾದಿಡ್ಡಿಯಾಗಿ ನಿಲುಗಡೆಯಾಗಿರುವ ವಾಹನಗಳನ್ನು ಮುಕ್ತಗೊಳಿಸಲು ಇಂದಿನಿಂದ ಬೃಹತ್ ಟೋಯಿಂಗ್ ಅಭಿಯಾನ ಆರಂಭವಾಗಿದೆ.
ಬೆಂಗಳೂರು ಅಭಿವೃದ್ಧಿ ಸಚಿವ ಕೃಷ್ಣಭೈರೇಗೌಡ ಈ ವಿಶೇಷ ಕಾರ್ಯಾಚರಣೆಗೆ ಚಾಲನೆ ನೀಡಿದ್ದು, ಐದು ವಲಯಗಳಲ್ಲಿ ಮೊದಲ ಹಂತದ ಕಾರ್ಯಾಚರಣೆ ನಡೆಯಲಿದೆ.
ಇಂದು ಬೆಳಗ್ಗೆ ಕ್ವೀನ್ಸ್ ರಸ್ತೆಯಲ್ಲಿದ್ದ ಅನಾಥ ವಾಹನವನ್ನು ಟೋಯಿಂಗ್ ಮಾಡುವ ಮೂಲಕ ಈ ಅಭಿಯಾನಕ್ಕೆ ಅಧಿಕೃತ ಚಾಲನೆ ನೀಡಲಾಗಿದೆ. ಈಗಾಗಲೇ ಪೊಲೀಸರು ಅನಾಥ ಕಾರುಗಳನ್ನು ಗುರುತಿಸಿ ಟೋಯಿಂಗ್ ನೊಟೀಸ್ ಅಂಟಿಸಿದ್ದರು. ಈಗಾಗಲೇ ೧,೫೮೧ ವಾಹನಗಳನ್ನು ಅನಾಥ ಎಂದು ಗುರುತಿಸಿದ್ದೇವೆ. ಒಂದು ವಾರದ ಹಿಂದೆಯೇ ನೊಟೀಸ್ ನೀಡಲಾಗಿತ್ತು. ಗಡುವಿನೊಳಗೆ ತೆರವುಗೊಳಿಸಲಾಗುವುದು. ಅದಾಗ್ಯೂ ವಾಹನ ಬೇಕು ಎನ್ನುವವರು ಟೋಯಿಂಗ್ ಶುಲ್ಕ ಹಾಗೂ ದಂಡ ಪಾವತಿ ಮಾಡಿ ಗಾಡಿ ತೆಗೆದುಕೊಂಡು ಹೋಗಬಹುದು. ಯಾರೂ ಬಂದು ಗಾಡಿಯನ್ನು ತೆಗೆದುಕೊಂಡು ಹೋಗಿಲ್ಲ ಎಂದಾದರೆ ಅದನ್ನು ಹರಾಜಿಗೆ ಇಡಲಾಗುತ್ತದೆ ಎಂದು ಕೃಷ್ಣಬೈರೇಗೌಡ ಹೇಳಿದ್ದಾರೆ.



