ಹೊಸದಿಗಂತ ಡಿಜಿಟಲ್ ಡೆಸ್ಕ್:
ಕರ್ನಾಟಕದಲ್ಲಿ ಮಾಲಿನ್ಯ ನಿಯಂತ್ರಣಕ್ಕಾಗಿ 1200 ಎಲೆಕ್ಟ್ರಿಕ್ ಬಸ್ಗಳನ್ನು ಕೇಂದ್ರ ಸರ್ಕಾರ ನೀಡುತ್ತಿದೆ. ಅದಕ್ಕಾಗಿ ರಾಜ್ಯ ಸರ್ಕಾರಕ್ಕೆ 500 ಕೋಟಿ ರೂ. ಅನುದಾನ ನೀಡಲಾಗಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.
ಉತ್ತರ ಪ್ರದೇಶದಲ್ಲಿ ಪ್ರಾದೇಶಿಕ ಕ್ಷಿಪ್ರ ಸಾರಿಗೆ ವ್ಯವಸ್ಥೆ (Regional Rapid Transit System) ಕಾರಿಡಾರ್ನ ದೆಹಲಿ-ಗಾಜಿಯಾಬಾದ್ – ಮೀರತ್ ರೈಲುಗಳ ವಿಭಾಗವನ್ನು ಉದ್ಘಾಟಿಸಿ ಮಾತನಾಡಿದ ಅವರು , ಬೆಂಗಳೂರಿನಲ್ಲೂ (Bengaluru) ಎರಡು ಮೆಟ್ರೋ ಲೇನ್ಗಳನ್ನು ಉದ್ಘಾಟಿಸಲಾಗುತ್ತಿದೆ. ಇದರಿಂದ ಜನರಿಗೆ ಅನುಕೂಲವಾಗಲಿದೆ ಎಂದು ಅವರು ಹೇಳಿದ್ದಾರೆ.
ಮೆಟ್ರೋದಲ್ಲಿ (Metro) ನಿತ್ಯ 80 ಲಕ್ಷಕ್ಕೂ ಅಧಿಕ ಜನರು ಪ್ರಯಾಣ ಮಾಡುತ್ತಿದ್ದಾರೆ. ಬೆಂಗಳೂರಲ್ಲಿ ಮೆಟ್ರೋ ವಿಸ್ತರಣೆ ಮಾಡಲಾಗುತ್ತದೆ. ಅಲ್ಲದೇ ಮೈಸೂರಿನಲ್ಲೂ (Mysuru) ಮೆಟ್ರೋ ಸಾರಿಗೆ ಆರಂಭಿಸುತ್ತೇವೆ ಎಂದು ಅವರು ಭರವಸೆ ನೀಡಿದ್ದಾರೆ.
ನನ್ನ ಬಾಲ್ಯವನ್ನು ರೈಲ್ವೆ ಪ್ಲಾಟ್ ಫಾರಂನಲ್ಲೇ ಕಳೆದೆ, ಇಂದು ರೈಲ್ವೆ ವ್ಯವಸ್ಥೆಯಲ್ಲಿನ ಬದಲಾವಣೆ ಹೆಚ್ಚು ಖುಷಿ ಕೊಟ್ಟಿದೆ. ರೈಲ್ವೆಯಲ್ಲಿ ಹೆಣ್ಣು ಮಕ್ಕಳಿಗೆ ಆದ್ಯತೆ ನೀಡಲಾಗಿದೆ. ಇದು ನಾರಿ ಶಕ್ತಿ ಅಭಿವೃದ್ಧಿಯ ಪ್ರತೀಕವಾಗಿದೆ. ನಮೋ ಭಾರತ್ ರೈಲಿನಲ್ಲಿ ಆಧುನಿಕತೆ, ವೇಗ ಮತ್ತು ಅತ್ಯುತ್ತಮ ಸೌಲಭ್ಯಗಳಿದೆ. ಭಾರತದ ಹೊಸ ಸಂಕಲ್ಪವನ್ನು ಈ ರೈಲು ತೋರಿಸುತ್ತಿದೆ ಎಂದಿದ್ದಾರೆ.
ಭಾರತೀಯ ರೈಲ್ವೆಯ ಕಾಯಕಲ್ಪ ಮಾಡಲಾಗುತ್ತಿದೆ. ರೈಲ್ವೆ ಸಂಪರ್ಕ ವಿಸ್ತರಣೆಯಿಂದ ಉದ್ಯೋಗ ಸೃಷ್ಟಿಯಾಗಲಿದೆ. ನನಗೆ ಸಣ್ಣ ಕನಸು ಕಾಣುವ ಹವ್ಯಾಸ ಇಲ್ಲ, ಕುಂಟುತ್ತಾ ನಡೆಯುವ ರೂಢಿಯೂ ಇಲ್ಲ. ನಾವು ಯಾವ ದೇಶಕ್ಕಿಂತ ಹಿಂದೆ ಉಳಿಯುವುದಿಲ್ಲ, ಭಾರತೀಯ ರೈಲ್ವೆ 100% ವಿದ್ಯುಧೀಕರಣ ದೂರ ಇಲ್ಲ ಎಂದಿದ್ದಾರೆ.