ಹೊಸದಿಗಂತ ಡಿಜಿಟಲ್ ಡೆಸ್ಕ್:
ರಾಜ್ಯದಲ್ಲಿ ಈಗಾಗಲೇ ಗ್ಯಾರಂಟಿ ಯೋಜನೆಯ ಗೊಂದಲದಲ್ಲಿ ಅಕ್ಕಿಗಾಗಿ ಕೇಂದ್ರ ಹಾಗು ರಾಜ್ಯ ಸರಕಾರದ ನಡುವೆ ಶೀತಲ ಸಮರ ನಡೆಯುತ್ತಿದ್ದು, ಇದರ ನಡುವೆ ಅಕ್ಕಿ ಬೆಲೆ (Rice Price) ಹೆಚ್ಚಿಸಲು ಕರ್ನಾಟಕ ರೈಸ್ ಮಿಲ್ಲರ್ಸ್ ಫೆಡರೇಷನ್ (Karnataka Rice Millers Federation) ಚಿಂತನೆ ನಡೆಸಿದೆ.
ಇದರಿಂದ ಈಗಾಗಲೇ ಅಗತ್ಯ ವಸ್ತು, ಇಂಧನ, ವಿದ್ಯುತ್ ದರ ಹೆಚ್ಚಳದಿಂದ ಕಂಗಾಲಾಗಿರುವ ಜನ ಸಾಮಾನ್ಯರು ಮತ್ತು ಮಧ್ಯಮ ವರ್ಗದವರಿಗೆ ಮತ್ತೊಂದು ಆಘಾತ ಎದುರಾಗಲಿದೆ.
ಅಕ್ಕಿ ಬೆಲೆ ಕೆಜಿಗೆ 5 ರೂ.ನಿಂದ 10 ರೂ.ವರೆಗೆ ಏರಿಕೆ ಮಾಡಲು ಚಿಂತನೆ ನಡೆಸಲಾಗಿದೆ. ಮಳೆ ಇಲ್ಲದೇ ಇರುವ ಕಾರಣ ಭತ್ತ ಸಿಗುತ್ತಿಲ್ಲ. ಹೀಗಾಗಿ ಬೆಲೆ ಏರಿಕೆ ಮಾಡಲು ಚಿಂತನೆ ಮಾಡಲಾಗುತ್ತಿದೆ ಎಂದು ರೈಸ್ ಮಿಲ್ಲರ್ಸ್ ಅಸೋಸಿಯೇಷನ್ ತಿಳಿಸಿದೆ.
ಪ್ರತಿ ಕೆಜಿ ಅಕ್ಕಿಗೆ ಪ್ರಸ್ತುತ 45 ರೂ.ವರೆಗೆ ದರ ಇದ್ದು, ತೆರಿಗೆ, ಕಾರ್ಮಿಕರ ವೆಚ್ಚ, ವಿದ್ಯುತ್ ಬಿಲ್ ಏರಿಕೆ ಮೊದಲಾದವುಗಳ ಹೆಚ್ಚಳದಿಂದ ರೈಸ್ ಮಿಲ್ ಮಾಲೀಕರಿಗೆ ಹೊರೆಯಾಗಿದ್ದು, ಇದನ್ನು ಸರಿದೂಗಿಸಲು ಅಕ್ಕಿ ಬೆಲೆ 5 ರಿಂದ 10 ರೂ ವರೆಗೆ ಹೆಚ್ಚಿಸುವುದು ಅನಿವಾರ್ಯವೆಂದು ಹೇಳಲಾಗಿದೆ.
ಕರ್ನಾಟಕ ಕಾಂಗ್ರೆಸ್ ಸರ್ಕಾರದ ಅನ್ನಭಾಗ್ಯ ಯೋಜನೆಯಡಿ ಬಿಪಿಎಲ್ ಕಾರ್ಡ್ದಾರ ಕುಟುಂಬದವರಿಗೆ ಪ್ರತಿ ತಿಂಗಳು ತಲಾ 10 ಕೆಜಿ ಅಕ್ಕಿ ಸರ್ಕಾರ ನೀಡಬೇಕಿದೆ. ಯೋಜನೆ ಇನ್ನಷ್ಟೇ ಪೂರ್ಣ ಪ್ರಮಾಣದಲ್ಲಿ ಅನುಷ್ಠಾನಗೊಳ್ಳಬೇಕಿದೆ. ಯೋಜನೆ ಜಾರಿಗೆ ಅಕ್ಕಿ ಖರೀದಿ ವಿಚಾರದಲ್ಲಿ ಗೊಂದಲ ಸೃಷ್ಟಿಯಾಗಿದೆ. ಅಂತಿಮವಾಗಿ ಈ ಯೋಜನೆ ಜಾರಿಯಾದರೂ ಕೇವಲ ಬಿಪಿಎಲ್ ಕಾರ್ಡ್ದಾರರಿಗಷ್ಟೇ ಪ್ರಯೋಜನವಾಗುವುದರಿಂದ ಅಕ್ಕಿ ಬೆಲೆ ಹೆಚ್ಚಳವಾದರೆ ಅದರ ಬಿಸಿ ನೇರವಾಗಿ ಮಧ್ಯಮವರ್ಗದ ಜನರಿಗೆ ತಟ್ಟಲಿದೆ .