ಹೊಸದಿಗಂತ ಡಿಜಿಟಲ್ ಡೆಸ್ಕ್:
ಮಾಜಿ ಸಚಿವ ರಮೇಶ್ ಜಾರಕಿಹೊಳಿ ಆಪ್ತ , ಬಿಜೆಪಿ ಮುಖಂಡನ ಮೇಲೆ ಮಾರಣಾಂತಿಕ ಹಲ್ಲೆ ನಡೆದಿದೆ.
ಸೋಮವಾರ ಸಂಜೆ ಜಯನಗರದ ಪೃಥ್ವಿ ಸಿಂಗ್ ಅವರ ಮನೆ ಮುಂದೆ ಐದಾರು ಜನರು ಏಕಾಏಕಿ ಬಂದು, ಹೊರಗೆ ಕರೆದೊಯ್ದು ಹಲ್ಲೆ ಮಾಡಿದ್ದಾರೆ ಎಂದು ಆರೋಪಿಸಲಾಗಿದೆ.
ಪೃಥ್ವಿ ಸಿಂಗ್ ಅವರು ಕೆಲವರ ಜೊತೆಗೆ ಮಾತನಾಡುತ್ತಿರುವುದು ಅವರ ಮನೆ ಬಳಿಯ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದೆ. ಗಾಯಗೊಂಡ ತಕ್ಷಣ ಪೃಥ್ವಿ ಸಿಂಗ್ ಅವರನ್ನು ಬೆಳಗಾವಿಯ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.
ಇತ್ತ ಎಂಎಲ್ಸಿ ಚನ್ನರಾಜ ಹಟ್ಟಿಹೋಳಿ ಹಾಗೂ ಬೆಂಬಲಿಗರೇ ಈ ಘಟನೆಗೆ ಕಾರಣ ಎಂದು ಹಲ್ಲೆಗೊಳಗಾದ ಪೃಥ್ವಿ ಸಿಂಗ್ ಹಾಗೂ ಅವರ ಮಗ ಜಸ್ವೀರ್ ಸಿಂಗ್ ಆರೋಪ ಮಾಡಿದ್ದಾರೆ.
ಕೂಲಂಕಷವಾಗಿ ತನಿಖೆ ಆಗಲಿ
ಬಿಜೆಪಿ ಮುಖಂಡನ ಮೇಲೆ ಚಾಕು ಇರಿತ ಪ್ರಕರಣ ಸಂಬಂಧ ಪ್ರತಿಕ್ರಿಯಿಸಿದ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್, ಏನಾಗಿದೆ ಅಂತ ನನಗೆ ಗೊತ್ತಿಲ್ಲ. ಈಗಷ್ಟೇ ಎಸ್ಪಿ ಅವರು ನನ್ನ ಗಮನಕ್ಕೆ ತಂದರು. ನಾನು ತಕ್ಷಣ ನನ್ನ ತಮ್ಮನಿಗೆ ಫೋನ್ ಮಾಡಿದೆ. ಹಾಗೇನಾದರೂ ಇದ್ದರೆ ಅವರು ಪೊಲೀಸ್ ದೂರು ಕೊಡಲಿ . ಹಲ್ಲೆ ಆರೋಪ ರಾಜಕೀಯ ಪ್ರೇರಿತವೋ, ಷಡ್ಯಂತ್ರವೋ ಅಂತ ಕೂಲಂಕಷವಾಗಿ ತನಿಖೆ ಆಗಲಿ ಎಂದು ತಿಳಿಸಿದ್ದಾರೆ.
ನಾನು ಆ ಹುಡುಗನ ಹೆಸರನ್ನು ಹೇಳಲು ಇಷ್ಟಪಡಲ್ಲ. ಆತ ಬೋಗಸ್, ಇದರ ಹಿಂದೆ ಯಾರಿದ್ದಾರೆ ಅಂತನೂ ಗೊತ್ತಾಗಬೇಕು. ಆತನ (ಪೃಥ್ವಿ ಸಿಂಗ್) ಹೆಸರು ಬರೆದಿಟ್ಟು ಆತ್ಮಹತ್ಯೆ ಮಾಡಿಕೊಂಡವರಿದ್ದಾರೆ. ಈಗ ನಮ್ಮ ಮೇಲೆ ಆರೋಪ ಬಂದಿದೆ. ಆ ತರ ಇದ್ದರೆ ದೂರು ಕೊಡಲಿ, 24 ಗಂಟೆ ಒಳಗೆ ಪೊಲೀಸರು ವರದಿ ಕೊಡಲಿ ಎಂದು ಸಚಿವರು ಹೇಳಿದರು.