January15, 2026
Thursday, January 15, 2026
spot_img

ಬಲವಂತದ ‘ಪ್ರೀತಿ’ಗೆ ಅಪ್ರಾಪ್ತೆ ಬಲಿ: ನೇಣು ಬಿಗಿದ ಸ್ಥಿತಿಯಲ್ಲಿ ಶವ ಪತ್ತೆ, ಆರೋಪಿಗಳು ಅರೆಸ್ಟ್

ಹೊಸದಿಗಂತ ವಿಜಯಪುರ

ಪ್ರೀತಿಸುವಂತೆ ಒತ್ತಾಯಿಸಿ, ಮಾನಸಿಕ ಮತ್ತು ದೈಹಿಕ ಕಿರುಕುಳ ನೀಡಿದ ಪರಿಣಾಮವಾಗಿ ಜಿಲ್ಲೆಯ ಮುದ್ದೇಬಿಹಾಳ ತಾಲ್ಲೂಕಿನಲ್ಲಿ ಅಪ್ರಾಪ್ತ ಬಾಲಕಿಯೊಬ್ಬಳು ನೇಣು ಬಿಗಿದ ಸ್ಥಿತಿಯಲ್ಲಿ ಅನುಮಾನಾಸ್ಪದವಾಗಿ ಸಾವನ್ನಪ್ಪಿದ್ದಾಳೆ. ಈ ಗಂಭೀರ ಪ್ರಕರಣಕ್ಕೆ ಸಂಬಂಧಿಸಿದಂತೆ ಮೂವರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.

ಘಟನೆಯ ಹಿನ್ನೆಲೆ:

ಮೃತ ಬಾಲಕಿಯ ಮೇಲೆ ಸ್ಥಳೀಯ ಯುವಕನಾದ ಮಾಳಿಂಗರಾಯ ದ್ಯಾಮಣ್ಣ ದಂಡೋಜಿಯು ‘ನನ್ನನ್ನೇ ಪ್ರೀತಿಸು ಮತ್ತು ಮದುವೆಯಾಗು’ ಎಂದು ಕೆಲವು ದಿನಗಳಿಂದ ತೀವ್ರವಾಗಿ ಪೀಡಿಸುತ್ತಿದ್ದ. ಈ ವಿಷಯ ತಿಳಿದ ಬಾಲಕಿಯ ಪೋಷಕರು ಯುವಕನಿಗೆ ಬುದ್ಧಿ ಹೇಳಿದ್ದರು ಎನ್ನಲಾಗಿದೆ.

ಆದರೆ, ಮಂಗಳವಾರದಂದು ಬಾಲಕಿಯ ತಂದೆ-ತಾಯಿ ಬೇರೆ ಊರಿಗೆ ಹೋಗಿ ಸಂಜೆ ಮನೆಗೆ ಮರಳಿದಾಗ ಬಾಲಕಿ ಮನೆಯಲ್ಲಿ ಇರಲಿಲ್ಲ. ರಾತ್ರಿಯಿಡೀ ಹುಡುಕಾಡಿದರೂ ಪತ್ತೆಯಾಗದ ಕಾರಣ ಆತಂಕಕ್ಕೆ ಒಳಗಾಗಿದ್ದರು. ಬುಧವಾರ ಬೆಳಿಗ್ಗೆ, ಬಾಲಕಿಯ ಮೃತದೇಹವು ಮನೆಯ ಸಮೀಪದ ಗಿಡವೊಂದಕ್ಕೆ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದು, ಹಲವು ಅನುಮಾನಗಳಿಗೆ ಕಾರಣವಾಗಿದೆ.

ಮೂರು ಆರೋಪಿಗಳ ಬಂಧನ:

ಘಟನೆ ಸಂಬಂಧ ತನಿಖೆ ಆರಂಭಿಸಿದ ಪೊಲೀಸರು, ಪ್ರಾಥಮಿಕ ಮಾಹಿತಿಗಳ ಆಧಾರದ ಮೇಲೆ ಮೂವರು ಆರೋಪಿಗಳನ್ನು ಬಂಧಿಸಿದ್ದಾರೆ. ಪ್ರಮುಖ ಆರೋಪಿ ಮಾಳಿಂಗರಾಯ ದ್ಯಾಮಣ್ಣ ದಂಡೋಜಿ ಜೊತೆಗೆ, ಶಿವನಗೌಡ ಚನ್ನಪ್ಪಗೌಡ ಬಿರಾದಾರ ಮತ್ತು ಜುಮ್ಮಣ್ಣ ದಳವಾಯಿ ಎಂಬುವವರನ್ನು ಕೂಡ ಬಂಧಿಸಲಾಗಿದೆ.

ಈ ಸಂಬಂಧ ಮುದ್ದೇಬಿಹಾಳ ಪೊಲೀಸ್ ಠಾಣೆಯಲ್ಲಿ ಆರೋಪಿಗಳ ವಿರುದ್ಧ ಪೋಕ್ಸೋ ಮತ್ತು ಅಟ್ರಾಸಿಟಿ ಕಾಯ್ದೆಯಡಿ ಪ್ರಕರಣ ದಾಖಲಿಸಿ, ತನಿಖೆ ಮುಂದುವರೆಸಲಾಗಿದೆ. ಕಿರುಕುಳದಿಂದ ಬೇಸತ್ತು ಬಾಲಕಿ ಆತ್ಮಹತ್ಯೆ ಮಾಡಿಕೊಂಡಿದ್ದಾಳೆಯೇ ಅಥವಾ ಇದರ ಹಿಂದೆ ಬೇರೆ ಯಾವುದಾದರೂ ಕಾರಣವಿದೆಯೇ ಎಂಬ ಕುರಿತು ಪೊಲೀಸರು ತೀವ್ರ ವಿಚಾರಣೆ ನಡೆಸುತ್ತಿದ್ದಾರೆ.

Most Read

error: Content is protected !!