ಹೊಸದಿಗಂತ ವರದಿ, ಬಳ್ಳಾರಿ:
ಮಹಾನಗರ ಪಾಲಿಕೆ ಈ ಅವದಿಯಲ್ಲಿ, ಮುಂದಿನ ಅವಧಿಯಲ್ಲೂ ಕಾಂಗ್ರೆಸ್ ಆಡಳಿತ ನಡೆಸಲಿದೆ, ಈ ವಿಚಾರದಲ್ಲಿ ನಗರ ಶಾಸಕ ನಾರಾ ಭರತ್ ರೆಡ್ಡಿ ಹಾಗೂ ನಮ್ಮ ಮಧ್ಯೆ ಬೆಂಕಿ ಹಚ್ಚುವ ಕೆಲಸ ಬೇಡ, ನಾವಿಬ್ಬರೂ ಅಣ್ಣ ತಮ್ಮಂದಿರಂತೆ ಇದ್ದೇವೆ, ನಮ್ಮಿಬ್ಬರ ಮಧ್ಯೆ ಬೆಂಕಿ ಹಚ್ಚುವ ಕೆಲಸ ಬೇಡ ಎಂದು ಜಿಲ್ಲಾ ಉಸ್ತುವಾರಿ ಸಚಿವ ಬಿ.ನಾಗೇಂದ್ರ ಅವರು ಸಿಡಿಮಿಡಿಗೊಂಡರು.
ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಬುಧವಾರ ನಡೆದ ಸುದ್ದಿಗೋಷ್ಟಿ ಬಳಿಕ ಬಳ್ಳಾರಿ ಮಹಾನಗರ ಪಾಲಿಕೆ ಮೇಯರ್ ಆಯ್ಕೆ ಕುರಿತು ಸುದ್ದಿಗಾರರು ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು, ಮೇಯರ್ ಆಯ್ಕೆ ವಿಚಾರದಲ್ಲಿ ನಮ್ಮಿಬ್ಬರಲ್ಲಿ ಯಾವುದೇ ಭಿನ್ನಾಭಿಪ್ರಾಯಗಳಿಲ್ಲ, ಗೊಂದಲಗಳಿಲ್ಲ, ಪ್ರಾದೇಶಿಕ ಆಯುಕ್ತರು ನಾನಾ ಕಾರಣಗಳಿಂದ ಮಂಗಳವಾರ ಬರಲು ಸಾಧ್ಯವಾಗದ ಹಿನ್ನೆಲೆ ಮೇಯರ್ ಚುನಾವಣೆಯನ್ನು ಡಿ.19ಕ್ಕೆ ಮುಂದೂಡಲಾಗಿದೆ.
ಈ ವಿಚಾರವನ್ನು ನಗರ ಶಾಸಕ ನಾರಾ ಭರತ್ ರೆಡ್ಡಿ ಬಣ, ಜಿಲ್ಲಾ ಉಸ್ತುವಾರಿ ಸಚಿವ ಬಿ.ನಾಗೇಂದ್ರ ಬಣ ಎಂದು ನಮ್ಮನಮ್ಮಲ್ಲೇ ಬೆಂಕಿ ಹಚ್ಚುವ ಕೆಲಸ ಬೇಡ, ನಮ್ಮಲ್ಲಿ ಯಾವುದೇ ಬಣಗಳಿಲ್ಲ, ನಮ್ಮದು ಕಾಂಗ್ರೆಸ್ ಬಣ, ಮೇಯರ್ ಆಯ್ಕೆ ವಿಚಾರದಲ್ಲಿ ಶಾಸಕರು ಸೇರಿದಂತೆ ಪಾಲಿಕೆಯ ನಮ್ಮ ಎಲ್ಲ ಸದಸ್ಯರನ್ನು ವಿಶ್ವಾಸಕ್ಕೆ ತೆಗೆದುಕೊಂಡೇ ಮೇಯರ್ ಚುನಾವಣೆ ನಡೆಸಲಾಗುವುದು. ನಮ್ಮಲ್ಲಿ ಯಾವುದೇ ಗುಂಪುಗಾರಿಕೆ ಇಲ್ಲ, ನಾವೆಲ್ಲರೂ ಅತ್ಯಂತ ವಿಶ್ವಾಸದಿಂದ ಇದ್ದೇವೆ, ನಮ್ಮದೂ ಮೆಯರ್ ಚುನಾವಣೆಯಲ್ಲಿ ಮತಗಳಿವೆ, ಈ ಹಿನ್ನೆಲೆ ನಾನಾ ಕಾರಣಗಳಿಂದ ಚುನಾವಣೆಯನ್ನು ಮುಂದೂಡಲಾಗಿದೆ, ಇದನ್ನೇ ಬಣ ರಾಜಕೀಯ ಎಂದು ಸೃಷ್ಟಿಸುವುದು ಸರಿಯಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು. ಬಿಜೆಪಿ ಅವರು ಅಧಿಕಾರಕ್ಕೆ ಅಂಟಿಕೊಂಡವರು, ಅಧಿಕಾರಕ್ಕಾಗಿ ಬಿಜೆಪಿ ಅವರು ಏನೂ ಮಾಡಲು ಸಿದ್ದ ಅವರು, ಕುತಂತ್ರ ಬುದ್ಧಿಯನ್ನು ಅನುಸರಿಸಲು ಮುಂದಾಗಿದ್ದಾರೆ, ಅವರ ಆಟ ನಡೆಯೋಲ್ಲ, ಬಳ್ಳಾರಿ ಮಹಾನಗರ ಪಾಲಿಕೆ ಕಾಂಗ್ರೆಸ್ ಆಡಳಿತ ನಡೆಸಲಿದೆ, ಇದರಲ್ಲಿ ಅನುಮಾನವೇ ಬೇಡ ಎಂದರು. ಈ ಸಂದರ್ಭದಲ್ಲಿ ಶಾಸಕರಾದ ಬಿ.ಎಂ.ನಾಗರಾಜ್, ಜೆ.ಎನ್.ಗಣೇಶ್ ಇತರರಿದ್ದರು.