ಹೊಸದಿಗಂತ ಡಿಜಿಟಲ್ ಡೆಸ್ಕ್:
ಬೀದರ್ನಲ್ಲಿ ಮಾವಿನಹಣ್ಣನ್ನು ತಿಂದು ಒಂದೇ ಕುಟುಂಬದ ಇಬ್ಬರು ಹೆಣ್ಣುಮಕ್ಕಳು ಮೃತಪಟ್ಟಿದ್ದರು. ಇವರಿಗೆ ಇನ್ನೂ ಮೂರು ಸಹೋದರಿಯರಿದ್ದು, ಅವರನ್ನು ಶಾಸಕ ಪ್ರಭು ಚೌಹಾಣ್ ದತ್ತು ತೆಗೆದುಕೊಂಡಿದ್ದಾರೆ.
ಔರಾದ್ ಕ್ಷೇತ್ರದ ಶಾಸಕ ಪ್ರಭು ಚೌಹಾಣ್ ಮೃತರ ಮನೆಗೆ ಭೇಟಿ ನೀಡಿದ್ದು, ಕುಟುಂಬಕ್ಕೆ ಸಹಾಯಹಸ್ತ ಚಾಚಿದ್ದಾರೆ. ನಿಮ್ಮ ಮಕ್ಕಳನ್ನು ದತ್ತು ತೆಗೆದುಕೊಳ್ಳಲು ಬಯಸುತ್ತೇನೆ. ಮಕ್ಕಳನ್ನು ಓದಿಸುತ್ತೇನೆ ಎಂದು ಹೇಳಿದ್ದಾರೆ.
ದಯನೀಯ ಸ್ಥಿತಿಯಲ್ಲಿದ್ದ ಕುಟುಂಬಕ್ಕೆ ಶಾಸಕರು ಸಹಾಯ ಮಾಡಿದ್ದು, ಓದು, ಮದುವೆ ಎಲ್ಲ ಜವಾಬ್ದಾರಿಯನ್ನು ನೋಡಿಕೊಳ್ಳುತ್ತೇನೆ. ವರ್ಷದೊಳಗಾಗಿ ಸರ್ಕಾರದ ವತಿಯಿಂದ ಮನೆಯನ್ನು ಕಟ್ಟಿಸಿಕೊಡುತ್ತೇನೆ ಎಂದು ಭರವಸೆ ನೀಡಿದ್ದಾರೆ.
ಶೆಂಬಳ್ಳಿ ಗ್ರಾಮದ ಆರು ಸದಸ್ಯರ ಕುಟುಂಬ ಮಾವಿನ ಹಣ್ಣನ್ನು ಸೇವಿಸಿ ಅಸ್ವಸ್ಥವಾಗಿತ್ತು. ಇಬ್ಬರು ಹೆಣ್ಣುಮಕ್ಕಳು ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿದ್ದರು. ಮತ್ತೊಬ್ಬ ಸಹೋದರಿ ವಿಜಯಶ್ರೀ ಇಂದಿಗೂ ಗಂಭೀರ ಸ್ಥಿತಿಯಲ್ಲಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.



