ಹೊಸದಿಗಂತ ವರದಿ ಬೀದರ್:
ಔರಾದ(ಬಿ) ತಾಲ್ಲೂಕಿನ ಬೋರಾಳ ಗ್ರಾಮದಲ್ಲಿ ನಡೆದ ದುರ್ಘಟನೆಯಲ್ಲಿ ಕೊಟ್ಟಿಗೆಗೆ ಬೆಂಕಿ ತಗುಲಿ ಪ್ರಾಣ ಕಳೆದುಕೊಂಡ ಶಂಕರ ಈರಗೊಂಡ ಮೇತ್ರೆ ಅವರ ಮನೆಗೆ ಮಾಜಿ ಸಚಿವರು ಹಾಗೂ ಔರಾದ(ಬಿ) ಶಾಸಕರಾದ ಪ್ರಭು ಬಿ.ಚವ್ಹಾಣ ಭೇಟಿ ನೀಡಿ ಸಾಂತ್ವನ ಹೇಳಿದರು.
ಈ ಸಂದರ್ಭದಲ್ಲಿ ಕುಟುಂಬಸ್ಥರು ದುಃಖವನ್ನು ಹಂಚಿಕೊಂಡರು. ಘಟನೆಯ ಬಗ್ಗೆ ಸೂಕ್ತ ತನಿಖೆ ನಡೆಸುವಂತೆ ಅಧಿಕಾರಿಗಳಿಗೆ ನಿರ್ದೇಶನ ನೀಡಿದ್ದೇನೆ. ಘಟನೆಯಿಂದ ಬಹಳಷ್ಟು ನೋವಾಗಿದೆ. 45ಕ್ಕೂ ಹೆಚ್ಚು ಮೇಕೆಗಳು ಮತ್ತು ಸಂಗ್ರಹಿಸಿಟ್ಟಿದ ದವಸ ಧಾನ್ಯಗಳೇಲ್ಲವೂ ಸುಟ್ಟು ಹೋಗಿವೆ. ಇಂತಹ ಅಕಾಲಿಕ ದುರ್ಘಟನೆ ಸಂಭವಿಸಬಾರದು. ದೇವರು ಮೃತರ ಆತ್ಮಕ್ಕೆ ಶಾಂತಿ ನೀಡಲಿ ಮತ್ತು ಕುಟುಂಬಕ್ಕೆ ಈ ದುಃಖವನ್ನು ಸಹಿಸುವ ಶಕ್ತಿಯನ್ನು ನೀಡಲಿ ಎಂದು ಪ್ರಾರ್ಥಿಸಿದರು.
ಕುಟುಂಬದ ಮುಖ್ಯ ಆಧಾರವಾಗಿದ್ದ ವ್ಯಕ್ತಿಯನ್ನು ಕಳೆದುಕೊಂಡಿರುವುದು ದೊಡ್ಡ ನಷ್ಟವಾಗಿದ್ದು, ಈ ಸಂಕಷ್ಟದ ಸಮಯದಲ್ಲಿ ತಮ್ಮಿಂದ ಸಾಧ್ಯವಿರುವ ಎಲ್ಲಾ ಸಹಾಯ ಒದಗಿಸಲಾಗುವುದು. ಸರ್ಕಾರದಿಂದ ಸೂಕ್ತ ಪರಿಹಾರ ದೊರಕಿಸಲು ವ್ಯವಸ್ಥೆ ಮಾಡುವುದಾಗಿ ಭರವಸೆ ನೀಡಿದರು. ಇದೇ ವೇಳೆ ಕುಟುಂಬಸ್ಥರಿಗೆ ವೈಯಕ್ತಿಕ ಧನಸಹಾಯ ಮಾಡಿದರು.
ಇದನ್ನೂ ಓದಿ:
ಬಾದಲಗಾಂವ ಗ್ರಾಮಕ್ಕೆ ಭೇಟಿ: ಕೃಷಿ ಚಟುವಟಿಯಲ್ಲಿ ತೊಡಗಿದ ವೇಳೆ ಅಕಸ್ಮಿಕವಾಗಿ ಸಿಡಿಲು ಬಡಿದು ಮೃತಪಟ್ಟ ಬಾದಲಗಾಂವ ಗ್ರಾಮದ ರಾಹುಲ ಭಾಸ್ಕರೆ ಅವರ ಮನೆಗೆ ಶಾಸಕರು ಭೇಟಿ ನೀಡಿ ಕುಟುಂಬಸ್ಥರಿಗೆ ಸಾಂತ್ವನ ಹೇಳಿ, ವೈಯಕ್ತಿಕ ಧನಸಹಾಯ ಮಾಡಿದರು.
ಕುಟುಂಬದ ಏಕೈಕ ಆದಾಯ ಮೂಲವಾಗಿರುವ ಯುವಕ ನಿಧನರಾಗಿರುವುದು ಭಾರೀ ಆಘಾತವನ್ನುಂಟುಮಾಡಿದೆ. ನಾನು ನಿಮ್ಮ ಕುಟುಂಬದ ಜೊತೆಗಿದ್ದೇನೆ. ಇಂತಹ ಸಂದರ್ಭದಲ್ಲಿ ಕುಟುಂಬಸ್ಥರು ಧೈರ್ಯ ಕಳೆದುಕೊಳ್ಳಬಾರದು. ನಾನು ಎಲ್ಲ ರೀತಿಯ ಸಹಕಾರ ನೀಡುತ್ತೇನೆ. ಸರ್ಕಾರದಿಂದಲೂ ಶೀಘ್ರ ಪರಿಹಾರ ಒದಗಿಸಲು ಪ್ರಯತ್ನಿಸುವೆ ಎಂದು ಭರವಸೆ ನೀಡಿದರು.
ಈ ಸಂದರ್ಭದಲ್ಲಿ ತಹಸೀಲ್ದಾರರಾದ ಮಹೇಶ ಪಾಟೀಲ, ಮುಖಂಡರಾದ ಶಿವಾಜಿರಾವ ಪಾಟೀಲ ಮುಂಗನಾಳ, ಯಾದುರಾವ ಮೇತ್ರೆ, ಅನೀಲ ನಾರಾಯಣಪೂರ, ದಾಮೋದರ ಶೇರಿಕಾರ, ಮಧುಸುಧನ ಬಿರಾದಾರ, ಜನಾರ್ಧನ ಪಾಟೀಲ, ಉದ್ಧವ್ ಪಾಟೀಲ, ಬಜರಂಗ ಪಾಂಡ್ರೆ, ಗಣಪತಿ ಸೇರಿದಂತೆ ಇತರರು ಉಪಸ್ಥರಿದ್ದರು.



