ಹೊಸದಿಗಂತ ಡಿಜಿಟಲ್ ಡೆಸ್ಕ್:
ರಾಜ್ಯ ಚುನಾವಣೆ (karnataka Election 2023) ಅಖಾಡದಲ್ಲಿ ಪ್ರಧಾನಿ ನರೇಂದ್ರ ಮೋದಿ ಭರ್ಜರಿ ರೋಡ್ ಶೋ ನಡೆಸುತ್ತಿದ್ದು, ನಾಳೆಯೂ ಬೆಂಗಳೂರಲ್ಲಿ ಬೃಹತ್ ರೋಡ್ ಶೋ ನಡೆಸಲಿದ್ದಾರೆ.
ಎಚ್ಎಎಲ್ನಿಂದ ಶುರುವಾಗುವ ರೋಡ್ ಶೋ ಟ್ರಿನಿಟಿ ಸರ್ಕಲ್ವರೆಗೆ ನಡೆಯಲಿದೆ. ಮುಂಜಾಗ್ರತಾ ಕ್ರಮವಾಗಿ ರಸ್ತೆಯ ಎರಡು ಬದಿ ಬ್ಯಾರಿಕೇಡ್ ಅಳವಡಿಕೆ ಮಾಡಲಾಗಿದೆ.
ಮೋದಿ ಓಡಾಡುವ ಮಾರ್ಗದಲ್ಲಿ ಸಾರ್ವಜನಿಕ ಸಂಚಾರವನ್ನು ನಿಷೇಧ ಮಾಡಲಾಗಿದೆ. ಸಂಚಾರಿ ಪೊಲೀಸರಿಂದ ಬದಲಿ ಮಾರ್ಗದ ವ್ಯವಸ್ಥೆ ಮಾಡಲಾಗಿದ್ದು, ಭಾನುವಾರ ಬೆಳಗ್ಗೆ 8 ರಿಂದ ಮಧ್ಯಾಹ್ನ 12 ಗಂಟೆಯವರೆಗೆ ಈ ಮಾರ್ಗವನ್ನು ಬಳಸದಿರಲು ಪೊಲೀಸರು ಮನವಿ ಮಾಡಿದ್ದಾರೆ.
ಎಲ್ಲಿಂದ ಎಲ್ಲಿವರೆಗೆ ರೋಡ್ ಶೋ?
ಮೇ 7ರಂದು ಬೆಳಗ್ಗೆ 9 ಗಂಟೆಯಿಂದ ಬೆಳಗ್ಗೆ 12ಗಂಟೆ ವರೆಗೂ ಸುಮಾರು 6.5 ಕಿ.ಮೀ ರೋಡ್ ಶೋ ನಡೆಯಲಿದೆ. ಕೆಂಪೇಗೌಡ ಪ್ರತಿಮೆ, ತಿಪ್ಪಸಂದ್ರ ರೋಡ್ನಿಂದ ಶುರುವಾಗಿ ಎಂ.ಜಿ ರೋಡ್ನ ಟ್ರಿನಿಟಿ ಸರ್ಕಲ್ವರೆಗೂ ನಡೆಯಲಿದೆ. ತಿಪ್ಪಸಂದ್ರ ರೋಡ್, ಎಚ್ಎಎಲ್ 2ನೇ ಹಂತ, 100 ಫೀಟ್ ರೋಡ್, ಇಂದಿರಾನಗರ, ಸುಬ್ರಮಣ್ಯ ಸ್ವಾಮಿ ದೇವಸ್ಥಾನ, ಎಂ.ಜಿ ರೋಡ್, ಟ್ರಿನಿಟಿ ಸರ್ಕಲ್ ಬಳಿ ನಮೋ ಪ್ರಚಾರ ನಡೆಯಲಿದೆ.
ಮೋದಿ ಸಂಚಾರ ಮಾಡಲಿರುವ ವಿಧಾನಸಭಾ ಕ್ಷೇತ್ರಗಳು
ಸಿ.ವಿ. ರಾಮನ್ ನಗರ ವಿಧಾನಸಭಾ ಕ್ಷೇತ್ರ, ಕೆ.ಆರ್ ಪುರಂ ವಿಧಾನಸಭಾ ಕ್ಷೇತ್ರ, ಶಿವಾಜಿನಗರ ವಿಧಾನಸಭಾ ಕ್ಷೇತ್ರ, ಶಾಂತಿನಗರ ವಿಧಾನಸಭಾ ಕ್ಷೇತ್ರಗಳಲ್ಲಿ ಮತದಾರರ ಮನ ಗೆಲ್ಲಲು ಮೋದಿ ಕೊನೇ ಹಂತದ ಕಸರತ್ತು ಮಾಡಲಿದ್ದಾರೆ.
ರಾಜಭವನ ರಸ್ತೆ, ಮೇಖ್ರಿ ಸರ್ಕಲ್, ರೇಸ್ ಕೋರ್ಸ್ ರಸ್ತೆ, ಜಗದೀಶನಗರ ಕ್ರಾಸ್, ಜೀವನಭೀಮಾನಗರ ಮುಖ್ಯರಸ್ತೆ, ಟಿ. ಚೌಡಯ್ಯ ರಸ್ತೆ ಮತ್ತು ರಮಣಮಹರ್ಷಿ ರಸ್ತೆ, 80 ಅಡಿ ರಸ್ತೆ ಇಂದಿರಾನಗರ, ಹೊಸ ತಿಪ್ಪಸಂದ್ರ ರಸ್ತೆ, ಹಳೆ ವಿಮಾನ ನಿಲ್ದಾಣ ರಸ್ತೆ, 12ನೇ ಮುಖ್ಯರಸ್ತೆ, 100 ಅಡಿ ರಸ್ತೆ, ಸುರಂಜನ್ ದಾಸ್ ರಸ್ತೆ, ಎಂ.ಜಿ ರಸ್ತೆ, ಬ್ರಿಗೇಡ್ ರಸ್ತೆ, ರೇಸ್ ಕೋರ್ಸ್ ರಸ್ತೆ, ಸಿ.ಎಂ.ಹೆಚ್ ರಸ್ತೆ, 17ನೇ ಎಫ್ ಕ್ರಾಸ್, ಆದರ್ಶ ಜಂಕ್ಷನ್, ಹಲಸೂರು ಮೆಟ್ರೋ ನಿಲ್ದಾಣ, ಟ್ರಿನಿಟಿ ಜಂಕ್ಷನ್ ಈ ಮಾರ್ಗದಲ್ಲಿ ಸಂಚರಿಸದೇ ಪರ್ಯಾಯ ಮಾರ್ಗ ಬಳಸುವಂತೆ ಕೋರಲಾಗಿದೆ.
ಟ್ರಾಫಿಕ್ ಸ್ಪೆಷಲ್ ಕಮಿಷನರ್ ಸಲೀಂ ಭಾಗಿಯಾಗಲಿದ್ದು, ಇಬ್ಬರು ಹೆಚ್ಚುವರಿ ಪೊಲೀಸ್ ಆಯುಕ್ತರು, ಡಿಸಿಪಿಗಳು ಸೇರಿ 3 ಸಾವಿರಕ್ಕೂ ಹೆಚ್ಚು ಪೊಲೀಸರು ಭಾಗಿಯಾಗಲಿದ್ದಾರೆ.