ಹೊಸದಿಗಂತ ಡಿಜಿಟಲ್ ಡೆಸ್ಕ್
ಮಧ್ಯಪ್ರದೇಶದ ಚಿತ್ರಕೂಟದಲ್ಲಿರುವ ಜಗದ್ಗುರು ರಾಮಭದ್ರಾಚಾರ್ಯರ ತುಳಸಿ ಪೀಠದಲ್ಲಿ ನಡೆದ ಸಾರ್ವಜನಿಕ ಸಮಾರಂಭದಲ್ಲಿ ಪ್ರಧಾನಿ ಮೋದಿ ಅವರು ಪಾಲ್ಗೊಂಡಿದ್ದಾರೆ.
ಈ ವೇಳೆ ಮಾತನಾಡಿದ ಅವರು, ಜಗದ್ಗುರು ರಾಮಭದ್ರಾಚಾರ್ಯರು ಪ್ರತಿಯೊಬ್ಬ ದೇಶವಾಸಿಗಳ ಕನಸನ್ನು ನನಸಾಗಿಸುವಲ್ಲಿ ದೊಡ್ಡ ಪಾತ್ರ ವಹಿಸಿದ್ದಾರೆ. ಅವರು ಕೊಡುಗೆ ನೀಡಿದ ರಾಮಮಂದಿರವು ಶ್ರೀ ಅಯೋಧ್ಯೆಯಲ್ಲಿ ಸಿದ್ಧವಾಗುತ್ತಿದೆ. ಆದಷ್ಟು ಶೀಘ್ರವೇ ಪೂರ್ಣಗೊಳ್ಳಲಿದೆ ಎಂದು ತಿಳಿಸಿದರು.
ಅಯೋಧ್ಯೆಯಲ್ಲಿ ರಾಮಮಂದಿರ ಶೀಘ್ರದಲ್ಲೇ ಸಿದ್ಧವಾಗಲಿದೆ ಎಂದ ಪ್ರಧಾನಿ ಮೋದಿ ಮಂದಿರ ನಿರ್ಮಾಣದಲ್ಲಿ ಹಿಂದು ಆಧ್ಯಾತ್ಮಿಕ ನಾಯಕ ಜಗದ್ಗುರು ರಾಮಭದ್ರಾಚಾರ್ಯರ ಕೊಡುಗೆ ಶ್ಲಾಘಿಸಿದ್ದಾರೆ. ಸಂಸ್ಕೃತವು ಸಂಪ್ರದಾಯಗಳ ಭಾಷೆ ಮಾತ್ರವಲ್ಲದೇ ನಮ್ಮ ಏಳಿಗೆ, ಅಸ್ಮಿತೆಯೂ ಆಗಿದೆ ಎಂದರು.
2024ರ ಜನವರಿ 22ರಂದು ನಡೆಯಲಿರುವ ರಾಮ ಮಂದಿರದ ಶಂಕುಸ್ಥಾಪನೆ ಸಮಾರಂಭಕ್ಕೆ ರಾಮ ಜನ್ಮಭೂಮಿ ತೀರ್ಥ ಕ್ಷೇತ್ರವು ತಮಗೆ ನೀಡಿದ ಆಹ್ವಾನ ಪ್ರಸ್ತಾಪಿಸಿದರು.
ಕಾರ್ಯಕ್ರಮದಲ್ಲಿ ಜಗದ್ಗುರು ರಾಮಭದ್ರಾಚಾರ್ಯ ವಿರಚಿತ ‘ಅಷ್ಟಾಧ್ಯಾಯಿ ಭಾಷ್ಯ’, ‘ರಮಾನಂದಾಚಾರ್ಯ ಚರಿತಂ’ ಮತ್ತು ‘ಭಗವಾನ್ ಶ್ರೀ ಕೃಷ್ಣ ಕಿ ರಾಷ್ಟ್ರಲೀಲಾ’ ಎಂಬ ಮೂರು ಕೃತಿಗಳನ್ನು ಪ್ರಧಾನಿಯವರು ಬಿಡುಗಡೆ ಮಾಡಿದರು.
ಚಿತ್ರಕೂಟವು ಅಭಿವೃದ್ಧಿ ವಿಚಾರದಲ್ಲಿ ಬಹಳ ಎತ್ತರ ಹಂತ ತಲುಪಲಿದೆ. ಚಿತ್ರಕೂಟದ ಪ್ರಮುಖ ಧಾರ್ಮಿಕ ಮತ್ತು ಸಾಮಾಜಿಕ ಸೇವಾ ಸಂಸ್ಥೆಯಾದ ತುಳಸಿ ಪೀಠವನ್ನು 1987 ರಲ್ಲಿ ಜಗದ್ಗುರು ರಾಮಭದ್ರಾಚಾರ್ಯರು ಸ್ಥಾಪಿಸಿದರು ಎಂದು ತಿಳಿಸಿದರು.