ಕಾಸರಗೋಡು ಜಿಲ್ಲೆಯಲ್ಲಿ ಮುಂಗಾರು ಮಳೆಯ ಅಬ್ಬರ: ಜನಜೀವನ ಅಸ್ತವ್ಯಸ್ತ

ಹೊಸ ದಿಗಂತ ವರದಿ, ಮಂಗಳೂರು :

ಕಾಸರಗೋಡು ಜಿಲ್ಲೆಯಲ್ಲಿ ಮುಂಗಾರು ಮಳೆಯ ಅಬ್ಬರ ಮತ್ತಷ್ಟು ಪ್ರಬಲಗೊಂಡಿದೆ. ಭಾನುವಾರ ರಾತ್ರಿ ಹಾಗೂ ಸೋಮವಾರ ಧಾರಾಕಾರ ಮಳೆಯೊಂದಿಗೆ ಬಿರುಗಾಳಿಯೂ ಬೀಸುತ್ತಿದ್ದು ಈ ಹಿನ್ನೆಲೆಯಲ್ಲಿ ಜಿಲ್ಲೆಯ ವಿವಿಧೆಡೆಗಳಲ್ಲಿ ಅಪಾರ ಹಾನಿ ಸಂಭವಿಸಿದೆ. ಬಿರುಸಿನ ಮಳೆಯಿಂದಾಗಿ ಹಲವೆಡೆ ರಸ್ತೆಗಳು ಸಹಿತ ತಗ್ಗು ಪ್ರದೇಶಗಳು, ಬಯಲು ಗದ್ದೆಗಳು ಜಲಾವೃತಗೊಂಡಿವೆ.

ವಾಮಂಜೂರು ಚೆಕ್‌ಪೋಸ್ಟ್ ಬಳಿಯಲ್ಲಾಗಿ ಹರಿಯುವ ಉಪ್ಪಳ ಹೊಳೆಯಲ್ಲಿ ನೀರು ಉಕ್ಕಿ ಹರಿಯುತ್ತಿದೆ. ಇದರಿಂದಾಗಿ ಆಸುಪಾಸಿನ ಬಯಲು ಪ್ರದೇಶಗಳು ನೀರಿನಿಂದಾವೃತಗೊಂಡಿವೆ. ಅಲ್ಲದೆ ವಿವಿಧೆಡೆಗಳಲ್ಲಿ ಮರಗಳು ಬಿದ್ದು ವ್ಯಾಪಕ ನಷ್ಟ ಉಂಟಾಗಿದೆ.

ವಿದ್ಯುತ್ ಕಂಬಗಳ ಮರಗಳು ಬಿದ್ದು ವ್ಯಾಪಕ ಹಾನಿ
ಮಂಗಲ್ಪಾಡಿ ತಿಂಬರ ಎಂಬಲ್ಲಿ ವಿದ್ಯುತ್ ಕಂಬಗಳ ಮೇಲೆ ಮರಗಳು ಬಿದ್ದು ಹಾನಿ ಉಂಟಾಗಿದ್ದು, ಪರಿಸರದ ತೋಟಗಳಲ್ಲೂ ಅಡಿಕೆ ಮರಗಳು ವಿದ್ಯುತ್ ತಂತಿಯ ಮೇಲೆ ಬಿದ್ದಿವೆ. ಈ ಹಿನ್ನೆಲೆಯಲ್ಲಿ ವಿದ್ಯುತ್ ಸಂಪರ್ಕ ಮೊಟಕುಗೊಂಡಿದೆ. ಬಂದ್ಯೋಡು ಬಳಿಯ ಮುಟ್ಟಂನಲ್ಲಿ ರಾಷ್ಟ್ರೀಯ ಹೆದ್ದಾರಿ ಸರ್ವೀಸ್ ರಸ್ತೆಯಲ್ಲಿ ಭಾರೀ ಪ್ರಮಾಣದಲ್ಲಿ ಮಳೆನೀರು ತುಂಬಿಕೊಂಡಿದೆ. ಇದರಿಂದ ದ್ವಿಚಕ್ರ, ತ್ರಿಚಕ್ರ ವಾಹನಗಳ ಸಂಚಾರಕ್ಕೆ ಸಮಸ್ಯೆ ಎದುರಾಗಿದೆ. ಬಂಬ್ರಾಣ ಬಯಲು ಪ್ರದೇಶದಲ್ಲೂ ನೀರು ತುಂಬಿಕೊಂಡಿದ್ದು, ಸಮೀಪದ ರಸ್ತೆ ಮುಳುಗಡೆಯಾಗುವ ಸಾಧ್ಯತೆಯಿದೆ.

ಜಿಲ್ಲೆಯ ಕರಾವಳಿಯಲ್ಲಿ ಪ್ರಬಲಗೊಂಡ ಕಡಲಬ್ಬರ
ಇನ್ನೊಂದೆಡೆ ಕಾಸರಗೋಡು ಕಸಬಾ ಕಡಪ್ಪುರ, ಚೇರಂಗೈ ಕಡಪ್ಪುರ, ತೃಕ್ಕನ್ನಾಡು, ಕುಂಬಳೆಯ ಕೊಯಿಪ್ಪಾಡಿ, ಪೆರುವಾಡ್, ಉಪ್ಪಳ ಮುಂತಾದ ಪ್ರದೇಶಗಳಲ್ಲಿ ಕಡಲ್ಕೊರೆತ ತೀವ್ರಗೊಂಡಿದ್ದು, ಸಮುದ್ರ ಕಿನಾರೆಯ ಜನರು ಆತಂಕದಿಂದಲೇ ಬದುಕುವಂತಾಗಿದೆ. ಪೈವಳಿಕೆಯಿಂದ ಬಾಯಿಕಟ್ಟೆ ಮೂಲಕ ಮೀಯಪದವಿಗೆ ತೆರಳುವ ಮಲೆನಾಡು ಹೆದ್ದಾರಿಯು ವಿವಿಧೆಡೆ ಕುಸಿಯಲಾರಂಭಿಸಿದೆ. ಈ ನಿಟ್ಟಿನಲ್ಲಿ ವಾಹನಗಳ ಸಂಚಾರಕ್ಕೆ ಸಂಚಕಾರ ಎದುರಾಗಿದೆ. ಈ ಮಧ್ಯೆ ಪೈವಳಿಕೆ ಗ್ರಾಮ ಪಂಚಾಯತ್ ಕಚೇರಿಯ ಹಿಂಬಂದಿಯ ಅವರಣಗೋಡೆ ಕುಸಿದು ಬಿದ್ದಿದ್ದು ಸಮಸ್ಯೆಗೆ ಕಾರಣವಾಗಿದೆ.

ರೈಲುಹಳಿ ಮೇಲೆ ತೆಂಗಿನ ಮರ ಬಿದ್ದು ಸಂಚಾರ ಮೊಟಕು
ರೈಲು ಹಳಿ ಸಮೀಪದಲ್ಲಿ ಸ್ಥಾಪಿಸಿದ್ದ ಹೈಟೆನ್ಶನ್ ವಿದ್ಯುತ್ ತಂತಿ ಮೇಲೆ ತೆಂಗಿನ ಮರವೊಂದು ಬುಡ ಸಮೇತ ಮಗುಚಿ ಬಿದ್ದ ಪರಿಣಾಮ ಕಾಸರಗೋಡು – ಮಂಗಳೂರು ಮಧ್ಯೆ ರೈಲು ಸಂಚಾರ ಗಂಟೆಗಳ ಕಾಲ ಮೊಟಕುಗೊಂಡಿದೆ. ಸೋಮವಾರ ಬೆಳಗ್ಗೆ ಪಳ್ಳಿಕುನ್ನು ಎಂಬಲ್ಲಿ ಹೈಟೆನ್ಶನ್ ವಿದ್ಯುತ್ ತಂತಿ ಮೇಲೆ ತೆಂಗಿನ ಮರ ಬಿದ್ದಿದೆ. ಇದರಿಂದಾಗಿ ಹೈಟೆನ್ಶನ್ ಲೈನ್ ರೈಲ್ವೇ ಹಳಿಯ ಮೇಲೆ ಬಾಗಿ ನಿಂತಿದ್ದು, ಅಪಾಯಕ್ಕೆ ಕಾರಣವಾಯಿತು. ವಿಷಯ ತಿಳಿದು ಮಂಗಳೂರಿಗೆ ತೆರಳುತ್ತಿದ್ದ ಮಲಬಾರ್ ಎಕ್ಸ್‌ಪ್ರೆಸ್ ರೈಲುಗಾಡಿಯನ್ನು ಕಾಸರಗೋಡು ರೈಲು ನಿಲ್ದಾಣದಲ್ಲಿ ನಿಲ್ಲಿಸಲಾಯಿತು. ಅಲ್ಲದೆ ಪ್ಯಾಸೆಂಜರ್ ರೈಲನ್ನು ತಳಂಗರೆಯಲ್ಲಿ ನಿಲುಗಡೆಗೊಳಿಸಲಾಯಿತು.

ಮಂಗಳೂರು ಭಾಗದಿಂದ ಕಾಸರಗೋಡಿಗೆ ಆಗಮಿಸುತ್ತಿದ್ದ ರೈಲುಗಾಡಿಗಳನ್ನು ನಿಲುಗಡೆಗೊಳಿಸಲಾಯಿತು. ಕಾಸರಗೋಡು ಪೊಲೀಸರು, ಅಗ್ನಿಶಾಮಕ ದಳದವರು ಹಾಗೂ ರೈಲ್ವೇ ಇಲಾಖೆ ಅಽಕಾರಿಗಳು ಸ್ಥಳಕ್ಕೆ ತೆರಳಿ ಅಗತ್ಯದ ಕ್ರಮಗಳನ್ನು ಕೈಗೊಂಡರು. ತೆಂಗಿನ ಮರವನ್ನು ತೆರವುಗೊಳಿಸಿ ಹೈಟೆನ್ಶನ್ ವಿದ್ಯುತ್ ಲೈನ್‌ನ್ನು ಮರುಸ್ಥಾಪಿಸಿದ ಬಳಿಕ ಹಳಿಯನ್ನು ಸುಗಮಗೊಳಿಸಿ ರೈಲುಗಾಡಿಗಳನ್ನು ಸಂಚರಿಸಲು ವ್ಯವಸ್ಥೆ ಮಾಡಲಾಯಿತು.

 

- Advertisement - Ply
Nova

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!