ಹೊಸದಿಗಂತ ಡಿಜಿಟಲ್ ಡೆಸ್ಕ್:
ಬಿಸಿಲಿನ ಬೇಗೆಯಲ್ಲಿ ಬೆಂದಿದ್ದ ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಮಾನ್ಸೂನ್ ಎಂಟ್ರಿ ಕೊಟ್ಟಿದ್ದು, ಮೊದಲ ಮಳೆ ಭರ್ಜರಿ ಎಂಟ್ರಿಕೊಟ್ಟಿದೆ.
ಗುರುವಾರ ರಾತ್ರಿ ಸುರಿದ ದಾಖಲೆ ಪ್ರಮಾಣದ ಮಳೆ ಇಡೀ ದೆಹಲಿಯನ್ನು ಸಂಕಷ್ಟಕ್ಕೆ ದೂಡಿದೆ. ಎಲ್ಲಾ ರಸ್ತೆಗಳಲ್ಲಿ ನೀರು ತುಂಬಿದೆ. ಇಡೀ ನಗರದಲ್ಲಿ ಟ್ರಾಫಿಕ್ ಜಾಮ್ ಆವರಿಸಿದ್ದು, ಜನರ ಆಕ್ರೋಶಕ್ಕೆ ಕಾರಣವಾಯಿತು.
ಗುರುವಾರ ರಾತ್ರಿ ಸರಿ ಸುಮಾರು ಮೂರು ಗಂಟೆ ಸುರಿದ ಮಳೆಗೆ ಭಾಗಶಃ ದೆಹಲಿ ಜಲಾವೃತಗೊಂಡಿದೆ. ದೆಹಲಿ ವಿಮಾನ ನಿಲ್ದಾಣದ ಟರ್ಮಿನಲ್ 1 ರ ಮೇಲ್ಛಾವಣಿಯ ಒಂದು ಭಾಗವು ಕುಸಿದುಬಿದ್ದು ಒಬ್ಬ ವ್ಯಕ್ತಿ ಸಾವನ್ನಪ್ಪಿ ಆರು ಮಂದಿ ಗಾಯಗೊಂಡಿದ್ದಾರೆ.
ಇಡೀ ನಗರದಲ್ಲಿ ಬಹುತೇಕ ಪ್ರದೇಶಗಳು ನೀರಿನಿಂದ ಜಲಾವೃತಗೊಂಡಿದೆ. ಐಟಿಓ, ಲೋಧಿ ಎಸ್ಟೇಟ್, ಕಮಲ ನಗರಾ, ಲಜ್ಪತ್ ನಗರ, ಏಮ್ಸ್ ಪ್ರದೇಶ, ಸಬ್ದರ್ ಜಂಗ್ ಎನ್ಕ್ಲೇವ್, ಮಾತೃವಾ ರಸ್ತೆ, ತೀನ್ ಮೂರ್ತಿ ಮಾರ್ಗ, ಮೂಲಚಂದ್, ಮಿಂಟೋ ರಸ್ತೆ, ಆನಂದ್ ವಿಹಾರ್, ಮೆಹ್ರೌಲಿ ಬದರ್ಪುರ್ ರಸ್ತೆ, ಮಂಡವಾಲಿ, ಭಿಕಾಜಿ ಕಾಮಾ ಪ್ಲೇಸ್, ಮಧು ವಿಹಾರ್, ಪ್ರಗತಿ ಮೈದಾನ, ಮುನಿರ್ಕಾ, ಧೌಲಾ ಕುವಾ, ಮೋತಿ ಬಾಗ್, ಐಟಿಒ ಮತ್ತು ನೋಯ್ಡಾದ ತಗ್ಗು ಪ್ರದೇಶದ ಮನೆಗಳಿಗೆ ನೀರು ನುಗ್ಗಿದೆ. ಇದರಿಂದ ವಾಹನ ಸಂಚಾರ ಅಸ್ತವ್ಯಸ್ತಗೊಂಡಿದ್ದು, ಕಿಲೋಮೀಟರ್ ಉದ್ದಕ್ಕೂ ಎಲ್ಲೆಡೆ ಟ್ರಾಫಿಕ್ ಜಾಮ್ ಆಗಿ ಸಂಚಾರಕ್ಕೆ ತೊಂದರೆಯಾಯಿತು.
ಆಗ್ನೇಯ ದೆಹಲಿಯ ಚಿತ್ತರಂಜನ್ ಪಾರ್ಕ್ನಲ್ಲಿರುವ ಮನೆಗಳಿಗೆ ನೀರು ನುಗ್ಗಿ ಗೃಹೋಪಯೋಗಿ ವಸ್ತುಗಳು ಮತ್ತು ಪೀಠೋಪಕರಣಗಳಿಗೆ ಹಾನಿಯಾಗಿದೆ. ಆಜಾದ್ ಮಾರ್ಕೆಟ್ ಅಂಡರ್ ಪಾಸ್ನಲ್ಲಿ ಪ್ರಯಾಣಿಕರ ಬಸ್ ಕೆಟ್ಟು ನಿಂತಿದ್ದು, ಪ್ರಯಾಣಿಕರನ್ನು ರಕ್ಷಿಸಿ ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರ ಮಾಡಲಾಯಿತು.
ಈ ನಡುವೆ ನಿನ್ನೆ ಒಂದೇ ದಿನ ರಾತ್ರಿ 228 ಎಂಎಂ ಮಳೆ ದಾಖಲಾಗಿದೆ. 1936 ರಲ್ಲಿ 235.5 ಎಂಎಂ ಮಳೆ ದಾಖಲಾಗಿತ್ತು. ಇದಾದ ಬಳಿಕ ನಿನ್ನೆ ಅತಿ ಹೆಚ್ಚು ಮಳೆ ಒಂದೇ ದಿನ ಸುರಿದಿದೆ ಎಂದು ಕೇಂದ್ರ ಹವಾಮಾನ ಇಲಾಖೆ ಹೇಳಿದೆ. ಇನ್ನೂ ಮುಂದಿನ ಒಂದು ವಾರ ಭಾರಿ ಮಳೆಯ ಎಚ್ಚರಿಕೆ ನೀಡಿದೆ.