ಮಳೆಗಾಲ ನಿಸರ್ಗ ಪ್ರಿಯರಿಗೆ ಖುಷಿಯ ಕಾಲ. ಆದರೆ ಆರೋಗ್ಯದ ದೃಷ್ಟಿಯಿಂದ ಈ ಕಾಲ ಹಲವಾರು ಸವಾಲುಗಳನ್ನು ತಂದೊಡ್ಡುತ್ತವೆ. ಶೀತ, ನೆಗಡಿ, ಕೆಮ್ಮಿನಂತಹ ಸಾಮಾನ್ಯ ಸೋಂಕುಗಳ ಜೊತೆಗೆ, ಚರ್ಮ ಸಂಬಂಧಿತ ತೊಂದರೆಗಳು ಕೂಡ ಈ ಸೀಸನ್ನಲ್ಲಿ ಹೆಚ್ಚಾಗುತ್ತವೆ. ತೇವಾಂಶ ಹೆಚ್ಚಿರುವುದರಿಂದ ಚರ್ಮದ ಮೇಲೆ ಶಿಲೀಂಧ್ರ ಹಾಗೂ ಬ್ಯಾಕ್ಟೀರಿಯಾ ದಾಳಿ ಸಾಮಾನ್ಯ. ಇದರಿಂದಾಗಿ ತುರಿಕೆ, ದದ್ದು, ಕಲೆ, ರ್ಯಾಶ್, ಇತ್ಯಾದಿ ಸಮಸ್ಯೆಗಳು ಕಾಡುತ್ತವೆ. ಅಂಥ ಪರಿಸ್ಥಿತಿಯಲ್ಲಿ, ಮನೆಮದ್ದುಗಳೇ ಮೊದಲ ಪರಿಹಾರ. ಇಲ್ಲಿವೆ ಕೆಲವೊಂದು ಪರಿಣಾಮಕಾರಿ ಮನೆಮದ್ದುಗಳು:
ಬೇವಿನ ನೀರಿನಲ್ಲಿ ಸ್ನಾನ ಮಾಡಿ
ಆಯುರ್ವೇದದ ಪ್ರಕಾರ, ಬೇವು ನೈಸರ್ಗಿಕ ಶಿಲೀಂಧ್ರ ನಾಶಕ. ಬೇವಿನ ಎಲೆಗಳನ್ನು ಕುದಿಸಿ ಆ ನೀರಿನಲ್ಲಿ ಸ್ನಾನ ಮಾಡುವುದು ತುರಿಕೆ ನಿವಾರಣೆಗೆ ಸಹಾಯಕ. ಬೇವಿನ ಎಲೆ ಪೇಸ್ಟ್ನನ್ನು ತುರಿಕೆ ಉಂಟಾದ ಭಾಗದಲ್ಲಿ ಹಚ್ಚಿದರೆ, ಸೋಂಕು ಕಡಿಮೆಯಾಗುತ್ತದೆ.
ಸಾಸಿವೆ ಎಣ್ಣೆ ಮತ್ತು ಕರ್ಪೂರ
ಸಾಸಿವೆ ಎಣ್ಣೆ ಚರ್ಮಕ್ಕೆ ತೇವ ನೀಡುತ್ತದೆ ಮತ್ತು ಕರ್ಪೂರದೊಂದಿಗೆ ಬೆರೆಸಿ ಬಳಸಿದರೆ, ಬ್ಯಾಕ್ಟೀರಿಯಾ ವಿರುದ್ಧ ಪರಿಣಾಮಕಾರಿಯಾಗಿ ಕಾರ್ಯನಿರ್ವಹಿಸುತ್ತದೆ. ದಿನಕ್ಕೆ ಎರಡು ಬಾರಿ ಹಚ್ಚುವುದರಿಂದ ಉರಿಯೂತ, ದದ್ದು ಕಡಿಮೆಯಾಗುತ್ತದೆ.
ಅರಶಿಣ ಪೇಸ್ಟ್
ಅರಶಿಣದಲ್ಲಿರುವ ‘ಕರ್ಕ್ಯುಮಿನ್’ ಅಂಶವು ಉರಿಯೂತ ವಿರೋಧಿ ಗುಣ ಹೊಂದಿದೆ. ಶುದ್ಧತೆಯ ಜೊತೆಗೆ, ಸೋಂಕು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ನೀರು ಅಥವಾ ತೆಂಗಿನ ಎಣ್ಣೆಯೊಂದಿಗೆ ಅರಿಶಿನ ಬೆರೆಸಿ ಬಳಸಿ.
ಅಲೋವೆರಾ ಜೆಲ್ ಬಳಕೆ
ತಾಜಾ ಅಲೋವೆರಾ ಜೆಲ್ ಅನ್ನು ದಿನಕ್ಕೆ ಎರಡು-ಮೂರು ಬಾರಿ ಹಚ್ಚುವುದರಿಂದ ತುರಿಕೆ ತಗ್ಗುತ್ತದೆ. ಇದು ಚರ್ಮವನ್ನು ತಂಪಾಗಿಸಿ ತೇವಾಂಶವನ್ನು ಕಾಪಾಡುತ್ತದೆ.
ತಿಳಿ ಬಟ್ಟೆ ಧರಿಸಿ
ಮಳೆಗಾಲದಲ್ಲಿ ಹತ್ತಿ ಬಟ್ಟೆ ಬಳಸುವುದು ತುಂಬಾ ಮುಖ್ಯ. ಸಿಂಥೆಟಿಕ್ ಅಥವಾ ಟೈಟ್ ಬಟ್ಟೆಗಳು ತುರಿಕೆಗೆ ಕಾರಣವಾಗಬಹುದು. ಬಟ್ಟೆ ಒದ್ದೆಯಾಗಿದ್ದರೆ ಬದಲಾಯಿಸುವುದು ಉತ್ತಮ.
ದಿನನಿತ್ಯ ಸ್ನಾನ
ದಿನವೂ ಸ್ನಾನ ಮಾಡಿ, ದೇಹವನ್ನು ಚೆನ್ನಾಗಿ ಒಣಗಿಸಿ ಸ್ವಚ್ಛವಾದ ಟವಲ್ ಬಳಸಿ. ಇವು ಚರ್ಮದ ಸೋಂಕು ತಡೆಯಲು ಸಹಾಯಕ. ಹೆಚ್ಚು ಬೆವರುವ ವ್ಯಕ್ತಿಗಳು ದಿನದಲ್ಲಿ ಎರಡು ಬಾರಿ ಸ್ನಾನ ಮಾಡುವುದೂ ಉತ್ತಮ.
ಈ ಮನೆಮದ್ದುಗಳು ಸಾಮಾನ್ಯ ತುರಿಕೆಗಳಿಗೆ ಪ್ರಯೋಜನಕಾರಿಯಾದರೂ, ತುರಿಕೆ ಉಲ್ಬಣಗೊಂಡರೆ ಅಥವಾ ರಕ್ತಸ್ರಾವ, ಗಾಯಗಳಾಗಿದ್ದರೆ ತಕ್ಷಣ ವೈದ್ಯರನ್ನು ಸಂಪರ್ಕಿಸುವುದು ಅನಿವಾರ್ಯ. (Disclaimer: ಈ ಲೇಖನವು ಸಾರ್ವಜನಿಕ ಮೂಲಗಳಿಂದ ಸಂಗ್ರಹಿಸಿದ ಮಾಹಿತಿಯಾಧಾರಿತವಾಗಿದೆ. ಇದು ವೈದ್ಯಕೀಯ ಸಲಹೆಯಲ್ಲ. ಹೆಚ್ಚಿನ ಸಮಸ್ಯೆಗಾಗಿ ತಜ್ಞರನ್ನು ಸಂಪರ್ಕಿಸಿ.)