ಹೊಸದಿಗಂತ ವರದಿ ಮಂಗಳೂರು:
ರಾಜ್ಯಾದ್ಯಂತ ಮಳೆಯ ಅಬ್ಬರ ಜೋರಾಗಿದ್ದು, ಕರಾವಳಿ ಮಂದಿಯ ನಿದ್ದೆಗೆಡಿಸಿದೆ. ಇನ್ನೇನು ಮುಂಗಾರು ಆಗಮನಕ್ಕೆ ಕೆಲವೇ ದಿನಗಳು ಬಾಕಿ ಇದ್ದು, ಸಮುದ್ರ ತೀರ ನಿವಾಸಿಗಳಲ್ಲಿ ಆತಂಕ ಆರಂಭವಾಗಿದೆ.
ದಕ್ಷಿಣ ಕನ್ನಡ, ಉಡುಪಿಯ ಉದ್ಯಾವರ, ಪಡುಕೆರೆ, ಕಾಸರಗೋಡಿನ ಕಡಲ್ಕೊರೆತ ಬಾಧಿತ ಪ್ರದೇಶಗಳಲ್ಲಿನ ಜನರು ಆತಂಕದಲ್ಲಿದ್ದು, ಅಗತ್ಯ ತಯಾರಿಯಲ್ಲಿ ನಿರತರಾಗಿದ್ದಾರೆ.
ಸುರತ್ಕಲ್ನ ಚಿತ್ರಾಪುರ, ಬೈಕಂಪಾಡಿ ಮೊಗವೀರರ ಮಹಾಸಭಕ್ಕೆ ಒಳಪಡುವ ಮೀನಕಳಿ, ಸಸಿಹಿತ್ಲುವಿನ ಮಿತ್ರಪಟ್ಟ,ಉಳ್ಳಾಲದ ಮೊಗವೀರ ಪಟ್ಣ, ಕೈಕೋ ರಸ್ತೆ, ಖಿಲರಿಯಾ ನಗರ, ಮುಕ್ಕಚ್ಚೇರಿ, ಕೋಟೆಪುರ ಸೇರಿ ಇನ್ನಿತರ ಪ್ರದೇಶಗಳಲ್ಲಿ ಪ್ರತೀ ವರ್ಷವೂ ಕಡಲ್ಕೊರೆತ ಉಂಟಾಗುತ್ತದೆ. ಇದಕ್ಕಾಗಿ ಕಲ್ಲುಗಳನ್ನು ಹಾಕುವ ಯೋಜನೆ ರೂಪಿಸಲಾಗಿದೆ. ಆದರೆ ಕಾರ್ಯರೂಪಕ್ಕೆ ಯಾವುದೂ ಬಂದಿಲ್ಲ.
ವರ್ಷಾನು ವರ್ಷಗಳಿಂದ ಕೊನೆಗಾಣದ ಸಮಸ್ಯೆ ಇದು. ಪ್ರತೀ ಬಾರಿ ಮಳೆಗಾಲದಲ್ಲೂ ಮರುಕಳಿಸುತ್ತಲೇ ಇದೆ. ಇಲ್ಲಿನ ಕಡಲ್ಕೊರೆತ ತಡೆಗೆ ಸರಕಾರವಂತೂ ಕೋಟ್ಯಾಂತರ ರುಪಾಯಿಗಳ ಯೋಜನೆಗಳನ್ನು ಪ್ರಕಟಿಸುತ್ತದೆ. ಪ್ರತಿ ಮಳೆಗಾಲದಲ್ಲೂ ಜನತೆ ಆಗ್ರಹಿಸುವುದು, ಜನಪ್ರತಿನಿಧಿಗಳು ಭರವಸೆ ನೀಡುವುದು ನಡೆಯುತ್ತಲೇ ಬಂದಿದೆ. ಆದರೆ ಪ್ರಯೋಜನ ಶೂನ್ಯ.
ಹೀಗಾಗಿ ಕಡಲ್ಕೊರೆತ ಬಾಧಿತ ಪ್ರದೇಶಗಳಲ್ಲಿ ಇರುವ ಜನರು ತಮ್ಮ ಸುರಕ್ಷತೆಗೆ ಬೇಕಾದ ಕೆಲಸವನ್ನು ತಾವೇ ಮಾಡುತ್ತಿದ್ದಾರೆ. ಈ ಬಗ್ಗೆ ಸರ್ಕಾರ ಮಳೆಗಾಲಕ್ಕೂ ಮುನ್ನ ಗಮನಹರಿಸುತ್ತದೆಯಾ ಎಂದು ಜನರು ಕಾಯುತ್ತಿದ್ದಾರೆ.