ಹೊಸದಿಗಂತ ಡಿಜಿಟಲ್ ಡೆಸ್ಕ್:
ಮುಂದಿನ 24 ಗಂಟೆಗಳಲ್ಲಿಯೇ ಮುಂಗಾರು ಮಳೆಯು ಕೇರಳ ಪ್ರವೇಶಿಸಲಿದ್ದು, ದೇಶದ ಹಲವೆಡೆ ಮಳೆಯಾಗಲಿದೆ ಎಂಬುದಾಗಿ ಹವಾಮಾನ ಇಲಾಖೆಯು ಮಹತ್ವದ ಮಾಹಿತಿ ಹಂಚಿಕೊಂಡಿದೆ.
ಮುಂದಿನ 24 ಗಂಟೆಗಳಲ್ಲಿ ಮುಂಗಾರು ಪ್ರವೇಶಿಸಲಿದೆ. ಮುಂಗಾರು ಪ್ರವೇಶದಿಂದಾಗಿ ಕೇರಳದಲ್ಲಿ ಮಳೆಯಾಗಲಿದೆ. ನಂತರ ಈಶಾನ್ಯ ಭಾರತದ ಕೆಲ ರಾಜ್ಯಗಳಲ್ಲಿ ಮಳೆಯಾಗಲಿದೆ. ಉಷ್ಣ ಗಾಳಿಯಿಂದ ಕಂಗೆಟ್ಟಿದ್ದ ಜನರಿಗೆ ಮುಂಗಾರು ಪ್ರವೇಶವು ತುಸು ರಿಲೀಫ್ ನೀಡಲಿದೆ. ಭಾರತದ ವಾಯವ್ಯ ಹಾಗೂ ಕೇಂದ್ರ ಭಾಗದಲ್ಲಿ ಉತ್ತಮ ಮಳೆಯಾಗುವ ಕಾರಣ ಕೃಷಿ ಚಟುವಟಿಕೆಗಳ ಆರಂಭಕ್ಕೆ ಮುನ್ನುಡಿ ಬರೆಯಲಿದೆ. ಸುಮಾರು 3-4 ಡಿಗ್ರಿ ಸೆಲ್ಸಿಯಸ್ ತಾಪಮಾನವು ಇಳಿಕೆಯಾಗಲಿದೆ ಎಂಬುದಾಗಿ ಹವಾಮಾನ ಇಲಾಖೆ ತಿಳಿಸಿದೆ.
ಜೂನ್ 1ರಂದು ಮುಂಗಾರು ಮಳೆಯು ಕೇರಳವನ್ನು ಪ್ರವೇಶಿಸಿ, ಜುಲೈ 15ರ ವೇಳೆಗೆ ದೇಶಾದ್ಯಂತ ವ್ಯಾಪಿಸುತ್ತದೆ. ಆದರೆ, ಈ ಬಾರಿ ಒಂದು ದಿನ ಮೊದಲೇ ಅಂದರೆ, ಮೇ 31ರಂದು ಮುಂಗಾರು ಪ್ರವೇಶಿಸುತ್ತದೆ ಎಂಬುದಾಗಿ ಹವಾಮಾನ ಇಲಾಖೆ ತಿಳಿಸಿತ್ತು. ಬುಧವಾರ ಹವಾಮಾನ ಇಲಾಖೆ ನೀಡಿರುವ ಮಾಹಿತಿ ನೋಡಿದರೆ, ಮೇ 30ರಂದೇ ಮುಂಗಾರು ಪ್ರವೇಶಿಸಲಿದೆ. ಕೇರಳದಲ್ಲಿ ಮಳೆಯಾದರೆ, ದಕ್ಷಿಣ ಕನ್ನಡ, ಕೊಡಗು ಸೇರಿ ಹಲವೆಡೆ ಮಳೆಯಾಗುವುದು ನಿಶ್ಚಿತ ಎಂದೇ ಹೇಳಲಾಗುತ್ತಿದೆ. ಕೇರಳದಲ್ಲಿ ಈಗಾಗಲೇ ಒಂದು ವಾರದಿಂದ ಭಾರಿ ಮಳೆಯಾಗಿದೆ. ಮುಂಗಾರು ಪ್ರವೇಶದಿಂದ ಲಕ್ಷದ್ವೀಪ ಸೇರಿ ಹಲವು ರಾಜ್ಯಗಳಲ್ಲಿ ಮಳೆಯಾಗಲಿದೆ ಎಂದು ಹೇಳಲಾಗುತ್ತಿದೆ.