ಹೊಸ ದಿಗಂತ ಡಿಜಿಟಲ್ ಡೆಸ್ಕ್:
ಮಕ್ಕಳಲ್ಲಿ ನೈತಿಕ ಶಿಕ್ಷಣದ ಕೊರತೆ ಇರುವುದರಿಂದ ಈ ವರ್ಷದಿಂದ ವಾರಕ್ಕೆ ಎರಡು ದಿನ ನೀತಿ ಪಾಠಗಳನ್ನು ಬೋಧಿಸಲಾಗುವುದು. ನೀತಿ ವಿಜ್ಞಾನ ಎಂಬ ಪಠ್ಯದ ಬೋಧನೆ ಜಾರಿಗೆ ತರಲಾಗುತ್ತಿದ್ದು, ಪಠ್ಯ ಸಿದ್ಧಗೊಂಡಿದೆ ಎಂದು ಶಿಕ್ಷಣ ಸಚಿವ ಮಧು ಬಂಗಾರಪ್ಪ ತಿಳಿಸಿದ್ದಾರೆ.
ಬಳ್ಳಾರಿಯಲ್ಲಿ ಇಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಒಳ ಮೀಸಲಾತಿ ಬಗ್ಗೆ ನ್ಯಾಯಮೂರ್ತಿ ನಾಗಮೋಹನ್ ದಾಸ್ ಅವರ ಸಮಿತಿ ವರದಿ ನೀಡಿದ ಬಳಿಕ ೧೩ ಸಾವಿರ ಶಿಕ್ಷಕರ ನೇಮಕ ಮಾಡಲಾಗುವುದು. ಅಲ್ಲದೇ ಅನುದಾನಿತ ಶಾಲೆಗಳಲ್ಲಿನ ಶಿಕ್ಷಕರ ನೇಮಕಕ್ಕೆ ಸಹ ಅನುಮೋದನೆ ನೀಡಲಾಗುವುದು ಎಂದು ಹೇಳಿದರು. ೧೯೯೫ರ ನಂತರ ಕನ್ನಡ ಮಾಧ್ಯಮಗಳ ಶಾಲೆಗಳನ್ನು ಅನುದಾನಿತ ಶಾಲೆಗಳನ್ನಾಗಿ ಮಾಡಿಲ್ಲ. ಅವುಗಳನ್ನು ಈ ವರ್ಷ ಅನುದಾನಿತ ಶಾಲೆಗಳನ್ನಾಗಿ ಮಾಡಲು ಮುಖ್ಯಮಂತ್ರಿಗಳ ಜೊತೆ ಚರ್ಚೆ ಮಾಡಲಾಗುವುದು ಎಂದರು.