ಹೊಸದಿಗಂತ ಡಿಜಿಟಲ್ ಡೆಸ್ಕ್:
ರಾಜ್ಯದಲ್ಲಿ ಹೆಚ್ಚುತ್ತಿರುವ ಬಾಣಂತಿಯರ ಸಾವಿಗೆ ನ್ಯಾಯ ಕೊಡಿಸಲು, ಕೇಂದ್ರ ಸರ್ಕಾರ ಮಧ್ಯ ಪ್ರವೇಶಿಸಬೇಕು ಹಾಗೂ ಕೇಂದ್ರ ಸರ್ಕಾರದಿಂದ ಸಂಶೋಧನಾ ತಂಡವನ್ನು ಕಳುಹಿಸಿ ಪರಿಶೀಲಿಸಬೇಕೆಂದು ಸಂಸದ ಡಾ.ಕೆ ಸುಧಾಕರ್ ಕೇಂದ್ರ ಆರೋಗ್ಯ ಸಚಿವ ಜೆ.ಪಿ.ನಡ್ಡಾ ಅವರಿಗೆ ಮನವಿ ಮಾಡಿದ್ದಾರೆ.
ಈ ಕುರಿತು ಅವರು ಸಚಿವರಿಗೆ ಪತ್ರ ಬರೆದಿರುವ ಸುಧಾಕರ್, ಕಳೆದ ಕೆಲವು ತಿಂಗಳಿಂದ ರಾಜ್ಯದ ಸರ್ಕಾರಿ ಆಸ್ಪತ್ರೆಗಳಲ್ಲಿ ಬಾಣಂತಿಯರು ಮೃತಪಡುವ ಘಟನೆ ವರದಿಯಾಗುತ್ತಿದೆ. 2024ರ ನವೆಂಬರ್ವರೆಗೆ 348 ತಾಯಂದಿರು ಮೃತಪಟ್ಟಿದ್ದಾರೆ. ಆಗಸ್ಟ್ನಿಂದ ನವೆಂಬರ್ವರೆಗೆ ಕೇವಲ 4 ತಿಂಗಳಲ್ಲಿ 217 ಪ್ರಕರಣ ವರದಿಯಾಗಿದೆ. ಈ 217 ಪ್ರಕರಣಗಳಲ್ಲಿ 179 ಪ್ರಕರಣಗಳು ಸರ್ಕಾರಿ ಆಸ್ಪತ್ರೆಗಳಿಗೆ ಸಂಬಂಧಿಸಿದ್ದಾಗಿದೆ. ಹೆಚ್ಚಿನವು ಪಿಪಿಎಚ್ ಹಾಗೂ ಎಎಫ್ಇ, ಅನೀಮಿಯ ಹಾಗೂ ನಿರ್ವಹಣೆಯಲ್ಲಿ ಲೋಪಕ್ಕೆ ಸಂಬಂಧಿಸಿದೆ. ಆಂಟಿಬಯೋಟಿಕ್ ಕೊರತೆ, ತರಬೇತಿ ಹೊಂದಿರುವ ಸಿಬ್ಬಂದಿ ಕೊರತೆ ಮೊದಲಾದವು ಕೂಡ ಇದಕ್ಕೆ ಕಾರಣ ಎಂದು ಅವರು ಪತ್ರದಲ್ಲಿ ವಿವರಿಸಿದ್ದಾರೆ.