ಹೊಸದಿಗಂತ ಡಿಜಿಟಲ್ ಡೆಸ್ಕ್:
]ಮಹಾರಾಷ್ಟ್ರದಲ್ಲಿ ಹೈಕೋರ್ಟ್ ಆದೇಶದಂತೆ ಧಾರ್ಮಿಕ ಕಟ್ಟಡಗಳಲ್ಲಿ ಶಾಶ್ವತವಾಗಿ ಅಳವಡಿಸಿರುವ ಎಲ್ಲ ಧ್ವನಿವರ್ಧಕಗಳನ್ನು ತೆಗೆದು ಹಾಕಲಾಗಿದೆ. ವಾಣಿಜ್ಯ ನಗರಿ ಈಗ ಧ್ವನಿವರ್ಧಕಗಳಿಂದ ಮುಕ್ತವಾಗಿದೆ ಎಂದು ಮುಂಬೈ ಪೊಲೀಸ್ ಆಯುಕ್ತ ದೇವನ್ ಭಾರ್ತಿ ಅವರು ಹೇಳಿದ್ದಾರೆ.
ಮುಂಬೈನಲ್ಲಿ ಯಾವುದೇ ನಿರ್ಧಿಷ್ಟ ಸಮುದಾಯವನ್ನು ಮಾತ್ರ ಪರಿಗಣಿಸಿಲ್ಲ. ಎಲ್ಲರಿಗೂ ಇದು ಅನ್ವಯವಾಗುವಂತೆ ಧ್ವನಿವರ್ಧಕಗಳನ್ನ ತೆಗೆದು ಹಾಕಲಾಗಿದೆ. ಸಿಎಂ ದೇವೇಂದ್ರ ಫಡ್ನವೀಸ್ ಅವರು ನೀಡಿದಂತೆ ನಿರ್ದೇಶನವನ್ನು ಅಧಿಕಾರಿಗಳು ಸರಿಯಾಗಿ ಪಾಲನೆ ಮಾಡಿದ್ದಾರೆ ಎಂದು ಹೇಳಿದ್ದಾರೆ.
ಧಾರ್ಮಿಕ ಕಟ್ಟಡಗಳಿಂದ ಧ್ವನಿವರ್ಧಕಗಳನ್ನು ಮುಕ್ತಗೊಳಿಸುವ ಮೊದಲು ಸಂಬಂಧಪಟ್ಟ ಸಮುದಾಯ, ಧಾರ್ಮಿಕ ನಾಯಕರು ಹಾಗೂ ರಾಜಕೀಯ ನಾಯಕರ ಜೊತೆ ಚರ್ಚೆ ಮಾಡಿದ್ದೇವೆ. ಬಳಿಕ ನ್ಯಾಯಾಲಯ ನೀಡಿದ ಆದೇಶವನ್ನು ಪಾಲನೆ ಮಾಡಿ ಸೌಂಡ್ ಸ್ಪೀಕರ್ಗಳನ್ನು ತೆರೆವುಗೊಳಿಸಿದ್ದೇವೆ ಎಂದು ಹೇಳಿದ್ದಾರೆ.
ಬಾಂಬೆ ಹೈಕೋರ್ಟ್ 2025ರ ಜನವರಿಯಲ್ಲಿ ಶಬ್ದ ಮಾಲಿನ್ಯದ ನಿಯಮಗಳನ್ನು ಉಲ್ಲಂಘಿಸುವ ಧ್ವನಿವರ್ಧಕಗಳ ವಿರುದ್ಧ ಕ್ರಮ ತೆಗೆದುಕೊಳ್ಳುವಂತೆ ಪೊಲೀಸರಿಗೆ ಸೂಚಿಸಿತ್ತು. ಮುಂಬೈ ನಗರವು ಅತಿ ದೊಡ್ಡ ಪ್ರದೇಶವಾಗಿದ್ದರಿಂದ ಇಲ್ಲಿ ಎಲ್ಲ ಧರ್ಮದ ಜನರು ವಾಸಿಸುತ್ತಿದ್ದಾರೆ. ಹೀಗಾಗಿ ಧ್ವನಿವರ್ಧಕಗಳಿಂದ ಯಾರಿಗೂ ಸಮಸ್ಯೆ ಮತ್ತು ಶಬ್ದಮಾಲಿನ್ಯ ಉಂಟಾಗಬಾರದು ಎಂದು ಕೋರ್ಟ್ ಹೇಳಿತ್ತು. ಸದ್ಯ ನ್ಯಾಯಾಯಲದ ಸೂಚನೆಯಂತೆ ಪೊಲೀಸರು ನಗರದಲ್ಲಿದ್ದ ಧಾರ್ಮಿಕ ಕಟ್ಟಡಗಳ ಮೇಲಿನ ಧ್ವನಿವರ್ಧಕಗಳನ್ನು ತೆರವುಗೊಳಿಸಿದ್ದಾರೆ ಎಂದು ಹೇಳಲಾಗಿದೆ.