ಹೊಸದಿಗಂತ ಡಿಜಿಟಲ್ ಡೆಸ್ಕ್:
ಖ್ಯಾತ ಸಂಗೀತ ನಿರ್ದೇಶಕ ಎಂ.ಎಂ. ಕೀರವಾಣಿ ತಂದೆ ಶಿವಶಕ್ತಿ ದತ್ತಾ ಕೊನೆಯುಸಿರೆಳೆದಿದ್ದಾರೆ. ಸೋಮವಾರ ರಾತ್ರಿ ಮಣಿಕೊಂಡದಲ್ಲಿರುವ ತಮ್ಮ ನಿವಾಸದಲ್ಲಿ ನಿಧನರಾದರು. ಅವರಿಗೆ 92 ವರ್ಷ ವಯಸ್ಸಾಗಿತ್ತು.
ಪ್ರಸಿದ್ಧ ಚಲನಚಿತ್ರ ಬರಹಗಾರ ವಿಜಯೇಂದ್ರ ಪ್ರಸಾದ್ (ನಿರ್ದೇಶಕ ಎಸ್.ಎಸ್.ರಾಜಮೌಳಿ ಅವರ ತಂದೆ) ಅವರ ಹಿರಿಯ ಸಹೋದರರಾದ ಶಿವಶಕ್ತಿ ದತ್ತಾ ಅವರು ಹಲವಾರು ಹಿಟ್ ಸಿನಿಮಾ ಗೀತೆಗಳಿಗೆ ಸಾಹಿತ್ಯ ಪೂರೈಸಿದ್ದಾರೆ. ಆದ್ರೆ ಇನ್ಮುಂದೆ ಅವರು ನೆನಪು ಮಾತ್ರ. ಶಿವಶಕ್ತಿ ದತ್ತಾ ನಿಧನಕ್ಕೆ ಸಂತಾಪ ವ್ಯಕ್ತವಾಗುತ್ತಿವೆ.
ಶಿವಶಕ್ತಿ ದತ್ತಾ ಅವರ ನಿಜವಾದ ಹೆಸರು ಕೊಡೂರಿ ಸುಬ್ಬರಾವ್. ಅವರು ಅಕ್ಟೋಬರ್ 8, 1932ರಂದು ರಾಜಮಂಡ್ರಿ ಬಳಿಯ ಕೊವ್ವೂರಿನಲ್ಲಿ ಜನಿಸಿದರು. ಬಾಲ್ಯದಿಂದಲೂ ಕಲೆಗಳಲ್ಲಿ ತೀವ್ರ ಆಸಕ್ತಿ ಹೊಂದಿದ್ದ ಅವರು ಮನೆ ಬಿಟ್ಟು ಮುಂಬೈನ ಕಲಾ ಕಾಲೇಜು ಸೇರಿಕೊಂಡಿದ್ದರು. ಎರಡು ವರ್ಷಗಳ ನಂತರ, ಅವರು ಕೊವ್ವೂರಿಗೆ ಮರಳಿದರು. ಕಮಲೇಶ್ ಎಂಬ ಕಾವ್ಯನಾಮದಲ್ಲಿ ವರ್ಣಚಿತ್ರಕಾರರಾಗಿ ಕೆಲಸ ಮಾಡಿದರು. ಸಂಗೀತದ ಮೇಲಿನ ಒಲವಿನಿಂದ ಗಿಟಾರ್, ಸಿತಾರ್ ಮತ್ತು ಹಾರ್ಮೋನಿಯಂ ನುಡಿಸಲು ಕಲಿತರು.
ನಂತರ ಚೆನ್ನೈಗೆ ತೆರಳಿ ತಮ್ಮ ಸಹೋದರ ವಿಜಯೇಂದ್ರ ಪ್ರಸಾದ್ ಅವರೊಂದಿಗೆ ಚಿತ್ರರಂಗಕ್ಕೆ ಪ್ರವೇಶಿಸಿದರು. ಈ ಜೋಡಿ 1988ರಲ್ಲಿ ಬಿಡುಗಡೆಯಾದ ‘ಜಾನಕಿ ರಾಮುಡು’ ಮೂಲಕ ಜನಪ್ರಿಯತೆ ಗಳಿಸಿತು. ಚಿತ್ರಕ್ಕೆ ಶಿವಶಕ್ತಿ ದತ್ತಾ ಚಿತ್ರಕಥೆಗಾರರಾಗಿ ಕೆಲಸ ಮಾಡಿದರು.