ಹೊಸದಿಗಂತ ವರದಿ, ಪಾಂಡವಪುರ:
ನನಗೆ ರಾಜಕೀಯವಾಗಿ ಎರಡನೇ ಭವಿಷ್ಯಕೊಟ್ಟಿರುವ ಜಿಲ್ಲೆ ಹಾಗೂ ರಾಜ್ಯದ ಜನರೆ ಋಣತೀರುಸುವರೆಗೂ ನನ್ನ ದೇಹ ಮಣ್ಣುಸೇರೋದಿಲ್ಲ ಎಂದು ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಹೇಳಿದರು.
ಪಟ್ಟಣದ ಪಾಂಡವ ಕ್ರೀಡಾಂಗಣದ ಮುಂಭಾಗ ನಡೆದ ನೂತನ ಸಂಸದ ಹಾಗೂ ಕೇಂದ್ರದ ಉಕ್ಕು ಮತ್ತು ಬೃಹತ್ ಕೈಗಾರಿಕೆ ಸಚಿವ ಎಚ್.ಡಿ.ಕುಮಾರಸ್ವಾಮಿ ಅವರಿಗೆ ಅಭಿನಂಧನೆ, ಕೃತಜ್ಞತಾ ಸಮಾರಂಭದಲ್ಲಿ ಅಭಿನಂಧನೆಸ್ವೀಕರಿಸಿ ಅವರು ಮಾತನಾಡಿದರು.
ನನಗೆ ಮೂರನೇ ಬಾರಿಗೆ ಹೃದಯ ಶಸ್ತ್ರ ಚಿಕಿತ್ಸೆಗೆ ಒಳಗಾಗಿದ್ದರೂ ಸಹ ನಾನು ಬದುಕಿದ್ದೇನೆ ಎಂದರೆ, ನನ್ನಿಂದ ನಾಡಿಗೆ ಯಾವುದೋ ಒಳ್ಳೆಯ ಕೆಲಸವಾಗಬೇಕಿದೆ ಎಂಬುದಾಗಿ ಭಾವಿಸಿದ್ದೇನೆ. ಒಕ್ಕಲಿಗ ಸಮುದಾಯ ನನ್ನ ಮತ್ತು ದೇವೇಗೌಡರನ್ನು ಬೆಳೆಸಿದ್ದು ಮುಂದಿನ ದಿನಗಳಲ್ಲಿ ಎಲ್ಲಾ ಸಮಾಜಗಳ ಕಷ್ಟಕಾರ್ಪಣ್ಯಗಳಿಗೆ ಸ್ಪಂಧಿಸುತ್ತೇನೆ. ನನಗೆ 2ನೇ ರಾಜಕೀಯ ಭವಿಷ್ಯಕೊಟ್ಟಿದ್ದೀರಿ ಮುಂದಿನ ದಿನಗಳಲ್ಲಿ ಒಳ್ಳೆಯ ಕೆಲಸ ಮಾಡುವ ಮೂಲಕ ದೇಶದಲ್ಲಿ ಇತಿಹಾಸ ಬರೆದು ಗೌರವತರುವ ಕೆಲಸ ಮಾಡುತ್ತೇನೆ. ನಿಮ್ಮೆಲ್ಲ ಋಣ ತೀರಿಸುವವರೆಗೂ ಈ ನನ್ನ ದೇಹ ಮಣ್ಣುಸೇರೋದಿಲ್ಲ ಎಂದು ಶಪಥಮಾಡಿದರು.