ಹೊಸದಿಗಂತ ಡಿಜಿಟಲ್ ಡೆಸ್ಕ್:
ʻಇಂದು ನನ್ನ ಮಗನಿಗೆ 8 ಗಂಟೆಯ ಆಪರೇಷನ್ ಇತ್ತು. ಪತ್ನಿ, ಮಗಳು ಎಲ್ಲರೂ ಫೋನ್ ಮಾಡಿ ಬರಲೇಬೇಕು ಅಂತ ಹೇಳಿದ್ರು. ನಾನು ಅದಕ್ಕೆ ಗಡಿಯಲ್ಲಿ ಸೈನಿಕರು ಜೀವ ಬಲಿ ಕೊಡ್ತಿದ್ದಾರೆ. ಇಂದಿರಾ ಗಾಂಧಿ, ರಾಜೀವ್ ಗಾಂಧಿ ದೇಶಕ್ಕಾಗಿ ಪ್ರಾಣತ್ಯಾಗ ಮಾಡಿದ್ರು. ಅವರ ತ್ಯಾಗದ ಮುಂದೆ ನಮ್ಮದೇನು? ಅಂತ ಹೇಳಿ ದೇಶಕ್ಕಾಗಿ ನಾನು ಇಲ್ಲಿಯೇ ಉಳಿದೆ ಎಂದು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ಹೇಳಿದ್ದಾರೆ.
ದೆಹಲಿಯ ರಾಮಲೀಲಾ ಮೈದಾನದಲ್ಲಿ ನಡೆದ ಬೃಹತ್ ಸಮಾವೇಶ ಬೃಹತ್ ಸಮಾವೇಶವನ್ನುದ್ದೇಶಿಸಿ ಮಾತನಾಡಿದ ಅವರು, ನಮ್ಮ ಮಗನಿಗೆ ಏನಾದ್ರೂ ಪರ್ವಾಗಿಲ್ಲ ಅಂತ ದೇಶದ 140 ಕೋಟಿ ಜನರಿಗಾಗಿ ನಾನು ಇಲ್ಲೇ ಉಳಿಯಲು ನಿರ್ಧರಿಸಿದೆ ಎಂದರು.
ನಾವು ಸೋತಿದ್ದೇವೆ, ಆದ್ರೆ ನಮ್ಮ ಸಿದ್ಧಾಂತ ಬದುಕಿದೆ. ಮೋದಿ ಒಮ್ಮೆ ಸೋತರೆ ಅವರ ಹೆಸರೂ ಎಲ್ಲೂ ಇರಲ್ಲ. ನಾವು 10 ಬಾರಿ ಸೋತರೂ ಬದುಕಿದ್ದೇವೆ, ಹೋರಾಟಕ್ಕೆ ಸಿದ್ಧರಿದ್ದೇವೆ. ವಂದೇ ಮಾತರಂ ಕೂಡ ನಮ್ಮಿಂದ ಕದ್ದಿದ್ದಾರೆ. ಆ ಕಳ್ಳರ ಬಗ್ಗೆ ಎಚ್ಚರಿಕೆಯಿಂದ ಇರಿ ಎಂದು ಕಿವಿಮಾತು ಹೇಳಿದರು.
ನಮ್ಮ ಯಾವ ಪ್ರಶ್ನೆಗಳಿಗೆ ಬಿಜೆಪಿ ನಾಯಕರು ಉತ್ತರಿಸಲ್ಲ. ಮೋದಿಯಿಂದ ಅಧಿಕಾರದಲ್ಲಿ ಕೂತವರನ್ನ ಕೆಳಗಿಳಿಸಬೇಕು. ರಾಹುಲ್ ಗಾಂಧಿ, ಪ್ರಿಯಾಂಕಾ ಗಾಂಧಿ ಆರ್ಎಸ್ಎಸ್ ಸಿದ್ಧಾಂತವನ್ನ ಮುಗಿಸುವ ನಿರ್ಧಾರ ಮಾಡಿದ್ದಾರೆ. ನೀವು ಅವರಿಗೆ ಜೊತೆಯಾಗಿ ನಿಲ್ಲಬೇಕು. ಆರ್ಎಸ್ಎಸ್ ಸಿದ್ಧಾಂತ ಬಡವರಿಗೆ ಅಪಾಯಕಾರಿ, ಸಂವಿಧಾನ ನೀಡಿದ ಅಧಿಕಾರವನ್ನ ಇವರು ರದ್ದು ಮಾಡ್ತಾರೆ. ಅವರು ಎಂದಿಗೂ ಬಡವರ ಬಗ್ಗೆ ಯೋಚನೆ ಮಾಡಲ್ಲ, ಬಡವರನ್ನು ಇನ್ನಷ್ಟು ಬಡವರಾಗಿ, ಶ್ರೀಮಂತರನ್ನು ಇನ್ನಷ್ಟು ಶ್ರೀಮಂತರನ್ನಾಗಿ ಮಾಡುತ್ತಿದ್ದಾರೆ. ಆದ್ರೆ ಬಡವರ ಬಗ್ಗೆ ಯೋಚಿಸುವುದು ರಾಹುಲ್ ಗಾಂಧಿ ಎಂದು ತಿಳಿಸಿದರು.

