ಹೊಸದಿಗಂತ ಡಿಜಿಟಲ್ ಡೆಸ್ಕ್:
ಒಂದೇ ಕುಟುಂಬದ ಮೂವರು ನಿಗೂಢವಾಗಿ ಮೃತಪಟ್ಟಿದ್ದು, ಇದು ಕೊಲೆಯಾಗಿರಬಹುದು ಎನ್ನುವ ಶಂಕೆ ಎದುರಾಗಿದೆ.
ಕೊಪ್ಪಳ ತಾಲೂಕಿನ ಹೊಸಲಿಂಗಾಪುರದ ರಾಜೇಶ್ವರಿ (50), ವಸಂತಾ (28), ಸಾಯಿಧರ್ಮತೇಜ್ (5) ಮೃತ ದುರ್ದೈವಿಗಳು.
ವಸಂತಾಗೆ ಆಂಧ್ರ ಪ್ರದೇಶದ ನಂದ್ಯಾಲ ಗ್ರಾಮದ ವ್ಯಕ್ತಿ ಜೊತೆ ಮದುವೆ ಆಗಿತ್ತು. ಆದರೆ ಕಳೆದ ಎರಡು ವರ್ಷದ ಹಿಂದೆ ಪತಿಯಿಂದ ದೂರವಾಗಿ, ಬಳಿಕ ಹೊಸಲಿಂಗಾಪುರದಲ್ಲಿ ಬಾಡಿಗೆ ಮನೆ ಮಾಡಿಕೊಂಡು ತಾಯಿ ಮತ್ತು ಮಗನ ಜೊತೆ ಇದ್ದರು.
ವಸಂತಾ ಹೊಸಲಿಂಗಾಪುರ ಬಳಿ ಇರುವ ಬೊಂಬೆ ಪ್ಯಾಕ್ಟರಿಯಲ್ಲಿ ಕೆಲಸ ಮಾಡುತ್ತಿದ್ದರು. ಇದೇ ಕಾರ್ಖಾನೆಯಲ್ಲಿ ಕೆಲಸ ಮಾಡುತ್ತಿದ್ದ ಅನ್ಯ ಧರ್ಮದ ವ್ಯಕ್ತಿಯನ್ನು ಎರಡನೇ ಮದುವೆಯಾಗಿದ್ದರು. ನಂತರ ಆರು ತಿಂಗಳ ಹಿಂದೆ ಕುಟುಂಬಸ್ಥರಿಂದ ಸ್ವಲ್ಪ ಅಂತರ ಕಾಯ್ದುಕೊಂಡಿದ್ದರು.
ನಿನ್ನೆ ರಾತ್ರಿ ರಾಜೇಶ್ವರಿ ಅವರಿಗೆ ಇನ್ನೊಬ್ಬ ಮಗಳು ಕರೆ ಮಾಡಿದ್ದರು. ಆದರೆ ರಾಜೇಶ್ವರಿ ಕರೆ ಸ್ವೀಕರಿಸಲಿಲ್ಲ. ಹೀಗಾಗಿ ಇಂದು ಮುಂಜಾನೆ ಮನೆಗೆ ಬಂದು ನೋಡಿದಾಗ ಪ್ರಕರಣ ಬೆಳಕಿಗೆ ಬಂದಿದೆ. ರಾಜೇಶ್ವರಿ ಮತ್ತು ಸಾಯಿಧರ್ಮತೇಜ್ ಶವ ಬೆಡ್ರೂಮ್ನಲ್ಲಿ ಮತ್ತು ವಸಂತಾ ಶವ ಅಡುಗೆ ಮನೆಯಲ್ಲಿ ಪತ್ತೆಯಾಗಿದೆ. ಸ್ಥಳಕ್ಕೆ ಮುನಿರಾಬಾದ್ ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿ, ಮಾಹಿತಿ ಕಲೆ ಹಾಕಿದ್ದಾರೆ.